Friday 29 May 2015

tuvataka sutta in kannada 14. ತುವಟಕ ಸುತ್ತ

14. ತುವಟಕ ಸುತ್ತ
(ಭಿಕ್ಷು ಚರ್ಯಾ)

1.            ದೇವತಾ - ಆದಿತ್ಯಬಂಧು! ಮಹಾಋಷಿ! ನಾನು ತಮ್ಮಲ್ಲಿ ವಿವೇಕ ಹಾಗು ಶಾಂತಿಪದದ ವಿಷಯದಲ್ಲಿ ಕೇಳುತ್ತೇನೆ. ಭಿಕ್ಷು ಹೀಗೆ ಲೋಕದಲ್ಲಿ ಯಾವುದರಲ್ಲಿಯೂ ಆಸಕ್ತಿ ತಾಳದೆ ಹೇಗೆ ನೋಡುತ್ತಾ ಶಾಂತನಾಗುತ್ತಾನೆ.
2.            ಭಗವಾನರು - ಸರ್ವ ಪ್ರಪಂಚದ ಬೇರು ಅಹಂಕಾರ ಎಂದು ಅರಿತು ಅದರ ಅಂತ್ಯಮಾಡಿ, ಯಾವುದೆಲ್ಲವೂ ತೃಷ್ಣೆಗಳು ಆಂತರ್ಯದಲ್ಲಿದೆಯೋ, ಅದರಲ್ಲಿ ರಹಿತನಾಗಲು ಸದಾ ಜಾಗರೂಕನಾಗಿರುವಂತೆ ಅಭ್ಯಾಸಿಸು.
3.            ಆಂತರ್ಯದಲ್ಲಾಗಲಿ ಅಥವಾ ಬಾಹ್ಯದಲ್ಲಾಗಲಿ ಯಾವ ಧರ್ಮವನ್ನು ಅರಿತಿರುವಿಯೋ, ಅದರಿಂದ ಅಭಿಮಾನ ಮೂಡದಿರಲಿ. ಸಂತರು ಅಂತಹದಕ್ಕೆ ಶಾಂತಿ ಎನ್ನಲಾರರು.
4.            ಆ ಕಾರಣದಿಂದ ಬೇರೆಯವರನ್ನು ಹೋಲಿಸಿ ತನ್ನನ್ನು ಶ್ರೇಷ್ಠನೆಂದು ಆಗಲಿ, ಸಮಾನ ಅಥವಾ ನೀಚನೆಂದು ಆಗಲಿ ಪರಿಗಣಿಸದಿರು. ಅನೇಕ ಪ್ರಕಾರದ ಸ್ಪರ್ಶವನ್ನು ಅನುಭವಿಸಿದರೂ ತನ್ನನ್ನು ವಿಕಲ್ಪಗಳಿಗೆ ಹಾಕದಿರಲಿ.
5.            ತನ್ನ ಆಂತರ್ಯದಲ್ಲಿ ಶಾಂತನಾಗಿರಲಿ, ಭಿಕ್ಷು ಬೇರೆಯ ಉಪಾಯದಿಂದ ಶಾಂತಿಯನ್ನು (ಬ್ರಹ್ಮಚರ್ಯ) ಅನ್ವೇಷಿಸದಿರಲಿ. ಯಾರು ಆಂತರ್ಯದಲ್ಲಿ ಶಾಂತನಾಗಿರುವನೋ, ಆತನಲ್ಲಿ ತನ್ನತನವೇ ಇಲ್ಲ ಎಂದ ಬಳಿಕ ಪರತ್ವವೆಲ್ಲಿ?
6.            ಹೇಗೆ ಸಮುದ್ರ ಮಧ್ಯೆಯಲ್ಲಿ ಅಲೆಯು ಏಳಲಾರದೋ, ಸ್ಥಿರತೆ ಸ್ಥಾಪಿತವಾಗಿರುತ್ತದೆಯೋ, ಹಾಗೆಯೇ ಸ್ಥಿರತೆ, ಚಂಚಲರಹಿತತೆಯುಳ್ಳ ಭಿಕ್ಷು ತೃಷ್ಣೆಯನ್ನು ಮಾಡದಿರಲಿ.
7.            ದೇವತಾ - ತೆರೆದ ನಯನವುಳ್ಳವರೇ, ತಾವು ಬಂಧನಗಳನ್ನು ದೂರೀಕರಿಸಲು ಸಾಕ್ಷಾತ್ ಧಮ್ಮವನ್ನು ತಿಳಿಸಿದ್ದೀರಿ. ತಮ್ಮ ಭದ್ರ ಪ್ರತಿಪದವನ್ನು ತಿಳಿಸಿ, ಅದರಲ್ಲಿ ಪಾತಿಮೋಕ್ಖ ಮತ್ತು ಸಮಾಧಿಯಿದೆ.
8.            ಭಗವಾನರು - ಚಕ್ಷುವಿನ ವಿಷಯದಲ್ಲಿ ಲೋಲುಪನಾಗದಿರು, ಗ್ರಾಮ್ಯ ಕಥನಗಳಿಂದ ಕಿವಿಯನ್ನು ಮುಚ್ಚಿಕೋ, ಸ್ವಾದದಲ್ಲಿ ಲೋಲುಪನಾಗದಿರು ಮತ್ತು ಲೋಕದಲ್ಲಿ ಯಾವುದನ್ನೂ ಸ್ವೀಕರಿಸಬೇಡ.
9.            ದುಃಖದ ಸ್ಪರ್ಶ ಆದಾಗಲೂ ಸಹಾ ಭಿಕ್ಷು ವಿಲಾಪಿಸದಿರಲಿ, ಭವದ, ತೃಷ್ಣೆ ಮಾಡದಿರಲಿ ಮತ್ತು ಭಯಾನಕತೆಯಿಂದ ಕಂಪಿತನಾಗದಿರಲಿ.
10.          ಅನ್ನ ಅಥವಾ ಪೇಯ, ಖಾದ್ಯ ಅಥವಾ ವಸ್ತ್ರಗಳು ಸಿಕ್ಕಿದಾಗ ಅದರ ಸಂಗ್ರಹ ಮಾಡದಿರಲಿ. ಅದೆಲ್ಲವೂ ಸಿಗದೆ ಇದ್ದಾಗ ಚಿಂತೆ ಮಾಡದಿರಲಿ.
11.          ಧ್ಯಾನಿಯಾಗಲಿ, ತಿರುಗಾಡುವವನು ಆಗದಿರಲಿ, ಸಂದೇಹ ದೂರೀಕರಿಸಲಿ, ಜಾಗರೂಕತೆ ತಪ್ಪದಿರಲಿ, ಭಿಕ್ಷುವು ಶಬ್ದ ಉಂಟುಮಾಡದ ಆಸನಗಳನ್ನು ಮತ್ತು ಶಯ್ಯಗಳನ್ನು ಬಳಸಲಿ.
12.          ಅತಿ ನಿಷ್ಠಾವಂತನಾಗಿರಲಿ, ಪ್ರಯತ್ನಶೀಲನಾಗಲಿ ಹಾಗು ಜಾಗರೂಕನಾಗಲಿ, ತೂಕಡಿಕೆ, ಮಾಯಾವಿತನ, ನಗು, ಹಾಸ್ಯ, ಆಟ, ಮೈಥುನ ಮತ್ತು ಶೃಂಗಾರವನ್ನು ತ್ಯಜಿಸಲಿ.
13.          ತಂತ್ರ-ಮಂತ್ರ ಸ್ವಪ್ನವಿಚಾರ, ಲಕ್ಷಣ ನೋಡುವಿಕೆ ಮತ್ತು ನಕ್ಷತ್ರಗಳ ವಿಶ್ವಾಸವನ್ನು ತ್ಯಜಿಸಲಿ, ಪಶುಪಕ್ಷಿಗಳ ಧ್ವನಿ ನೋಡಿ ಅರ್ಥ ಹೇಳುವಿಕೆ, ಗರ್ಭಧಾರಣೆ ಮಾಡಿಸುವಿಕೆ, ಚಿಕಿತ್ಸೆ ಮಾಡಿಸುವಿಕೆ - ಶ್ರದ್ಧೆಯುಳ್ಳ ಭಿಕ್ಷುವು ಇವುಗಳ ಅಭ್ಯಾಸ ಮಾಡದಿರಲಿ.
14.          ಭಿಕ್ಷುವು ನಿಂದೆಯಿಂದ ವಿಚಲಿತನಾಗದಿರಲಿ, ಪ್ರಶಂಸೆಯಲ್ಲಿ ಪ್ರಫುಲ್ಲಿತನಾಗದಿರಲಿ ಮತ್ತು ಲೋಭ, ಸ್ವಾರ್ಥ, ಕ್ರೋಧ ಹಾಗು ಚಾಡಿತನವನ್ನು ತ್ಯಜಿಸಲಿ.
15.          ಭಿಕ್ಷುವು ಕ್ರಯವಿಕ್ರಯಗಳಲ್ಲಿ ತೊಡಗದಿರಲಿ, ಎಲ್ಲಿಯೂ ಯಾರಿಗೂ ದೂಷಿಸದಿರಲಿ, ಗ್ರಾಮದಲ್ಲಿ ಯಾರಿಗೂ ಬಯ್ಯದಿರಲಿ ಮತ್ತು ಲಾಭದ ಇಚ್ಛೆಯಿಂದ ಜನರನ್ನು ಆಕಷರ್ಿಸದಿರಲಿ (ಮಾತನಾಡದಿರಲಿ).
16.          ಭಿಕ್ಷು ಸ್ವ-ಪ್ರಶಂಸೆಯುಳ್ಳವನಾಗದಿರಲಿ, ಸ್ವಾರ್ಥದ ಮಾತು ಆಡದಿರಲಿ, ಉದ್ದಂಡನಾಗದಿರಲಿ (ಹಠಮಾರಿ) ಮತ್ತು ಜಗಳಗಳ ಮಾತು ಆಡದಿರಲಿ.
17.          ಅಸತ್ಯ ಭಾಷಣ ಮಾಡದಿರಲಿ, ಅರಿತು ಸಹಾ ಮೋಸ ಮಾಡದಿರಲಿ ಮತ್ತು ಜೀವಿಸುವಿಕೆಯಲ್ಲಾಗಲಿ, ಪ್ರಜ್ಞೆಯಲ್ಲಿ ಆಗಲಿ, ಶೀಲವ್ರತಗಳಲ್ಲಿ ಆಗಲಿ, ಪರರಿಗೆ ಅನಾಧರಣೆ ಮಾಡದಿರಲಿ.
18.          ಬಹುಭಾಷಿ ಶ್ರಮಣರ ದೋಷಯುಕ್ತ ಮಾತುಗಳನ್ನು ಕೇಳಿ ಅದಕ್ಕೆ ಕಠೋರವಾದ ಪ್ರತಿನುಡಿ ಆಡದಿರಲಿ, ಸಂತರು ಪ್ರತಿ ಹಿಂಸಕರಾಗಿರುವುದಿಲ್ಲ.
19.          ಈ ಧಮ್ಮವನ್ನು ಅರಿತು ವಿವೇಕಿ ಭಿಕ್ಷು ಸದಾ ಜಾಗರೂಕನಾಗಿರಲು ಅಭ್ಯಾಸಿಸಲಿ, ನಿಬ್ಬಾಣವನ್ನೇ ಶಾಂತಿ ಎಂದರಿತು ಗೌತಮರ ಶಿಕ್ಷಣದಲ್ಲಿ ಜಾಗರೂಕತೆ ತಪ್ಪದಿರಲಿ.
20.          ಆ ವಿಜಯಿಯು ಅಜೇಯವಾದ ಧಮ್ಮವನ್ನು ಸಾಕ್ಷಾತ್ ಅರಿತಿರುವರು. ಆದ್ದರಿಂದ ಜಾಗರೂಕನಾಗಿ ಆ ಭಗವಾನರ ಶಿಕ್ಷಣವನ್ನು ಸಮ್ಮಾನಪೂರ್ವಕ ಅಭ್ಯಾಸ ಮಾಡಲಿ.
ಇಲ್ಲಿಗೆ ತುವಟಕ ಸುತ್ತ ಮುಗಿಯಿತು.


No comments:

Post a Comment