Saturday, 30 August 2014

vasala sutta in kannada (the discussion about who is mean fellow)



7. ವಸಲ ಸುತ್ತ
(ವಸಲ (ನೀಚ) ಯಾರು?)
ನಾನು ಹೀಗೆ ಕೇಳಿದ್ದೇನೆ. ಒಮ್ಮೆ ಭಗವಾನರು ಶ್ರಾವಸ್ತಿಯಲ್ಲಿ ಅನಾಥಪಿಂಡಿಕನ ಜೇತವನ ಆರಾಮದಲ್ಲಿ ವಿಹರಿಸುತ್ತಿದ್ದರು. ಆಗ ಭಗವಾನರು ಪೂವರ್ಾಹ್ನ ಸಮಯದಲ್ಲಿ ಚೀವರ ಧರಿಸಿ, ಪಾತ್ರೆ ಎತ್ತಿಕೊಂಡು ಶ್ರಾವಸ್ತಿಯಲ್ಲಿ ಆಹಾರದ ಅನ್ವೇಷಣೆಗೆ ಹೊರಟರು. ಆ ಸಮಯದಲ್ಲಿ ಅಗ್ನಿ ಭಾರದ್ವಾಜ ಬ್ರಾಹ್ಮಣನ ಮನೆಯಲ್ಲಿ ಅಗ್ನಿಯು ಉರಿಯುತ್ತಿತ್ತು. ಅದರಲ್ಲಿ ಆಹುತಿಯ ಸಾಮಗ್ರಿಗಳನ್ನು ಹಾಕುತ್ತಿದ್ದನು. ಆಗ ಭಗವಾನರು ಭಿಕ್ಷಾಟನೆ ಮಾಡುತ್ತಾ ಅಗ್ನಿ ಭಾರದ್ವಾಜನ ಮನೆಗೆ ಬಂದರು. ಅಗ್ನಿ ಭಾರದ್ವಾಜನು ಭಗವಾನರು ಬರುತ್ತಿರುವುದನ್ನು ದೂರದಿಂದಲೇ ಕಂಡು ಹೀಗೆ ಕಿರುಚಿದ.

ಹೇ ಮುಂಡಕ, ಹೇ ಶ್ರಮಣ, ಹೇ ವೃಷಲ (ನೀಚ) ಅಲ್ಲೇ ನಿಲ್ಲು. ಹೀಗೆ ನುಡಿದಂತಹ ಬ್ರಾಹ್ಮಣನಿಗೆ ಭಗವಾನರು ಹೀಗೆ ಹೇಳಿದರು-
ಬ್ರಾಹ್ಮಣನೇ, ನೀನು ವೃಷಲ (ನೀಚ) ಆಗುವಂತಹ ಮಾತುಗಳನ್ನು ಅರಿತಿದ್ದೀಯೇನು?
ಹೇ ಗೋತಮ, ನಾನು ನೀಚ ಆಗುವಂತಹ ಮಾತುಗಳನ್ನು ಒಪ್ಪುವುದಿಲ್ಲ. ಸರಿ ಗೋತಮರೇ, ನನಗೆ ಧಮ್ಮೋಪದೇಶ ನೀಡಿ, ಅದರಿಂದ ವೃಷಲ (ನೀಚ) ಅಥವಾ ನೀಚನಾಗುವ ಮಾತುಗಳನ್ನು ಅರಿಯುತ್ತೇನೆ.
ಹಾಗಾದರೆ ಬ್ರಾಹ್ಮಣ ಏಕಾಗ್ರತೆ ವಹಿಸಿ ಕೇಳು, ಅರಿತುಕೋ ಹೇಳುತ್ತೇನೆ.
ಹಾಗೇ ಆಗಲಿ ಎಂದು ಅಗ್ನಿ ಭಾರದ್ವಾಜನು ಉತ್ತರಿಸಿದನು.
ಭಗವಾನರು ಹೀಗೆ ಹೇಳಿದರು-
1. ಯಾವ ಮನುಷ್ಯನು ಕ್ರೋಧಿ, ವೈರ್ಯ ಹಾಗು ಅತಿ ಮಾತ್ಸರ್ಯದಿಂದ ಕೂಡಿರುವನೋ, ಮಿಥ್ಯಾದೃಷ್ಟಿವಂತನೊ ಹಾಗು ಮಾಯಾವಿಯೋ ಆತನನ್ನು ವಸಲ (ನೀಚ) ನೆಂದು ಭಾವಿಸು.
2. ಯಾರು ಮಾನವ ಪ್ರಾಣಿ ಹಾಗು ಅಂಡಜ (ಮೊಟ್ಟೆ ಒಡೆದು ಜನ್ಮಿಸುವ) ಗಳಿಗೆ ಹಿಂಸಿಸುವನೋ, ಯಾರಿಗೆ ಪ್ರಾಣಿಗಳ ಬಗ್ಗೆ ದಯೆಯೇ ಇಲ್ಲವೋ ಅವನನ್ನು ನೀಚನೆಂದು ಭಾವಿಸು.
3. ಯಾರು ಗ್ರಾಮಗಳನ್ನು, ಹಳ್ಳಿಗಳನ್ನು ನಷ್ಟ ಮಾಡುವನೋ ಹಾಗು ಆಕ್ರಮಣ ಮಾಡುವನೋ, ಯಾರು ಕುಖ್ಯಾತನಾಗಿರುವ ಅತ್ಯಾಚಾರಿಯೋ, ಆತನನ್ನು ನೀಚನೆಂದು ಭಾವಿಸು.
4. ಯಾರು ಗ್ರಾಮ ಅಥವಾ ಅರಣ್ಯದಲ್ಲಿ ಪರರ ಸಂಪತ್ತನ್ನು ಅಪಹರಿಸುವನೋ, ಆತನನ್ನು ನೀಚನೆಂದು ಭಾವಿಸು.
5. ಯಾರು ಸಾಲವನ್ನು ಸ್ವೀಕರಿಸಿ, ಕೇಳಿದಾಗ ನಿನ್ನದು ಯಾವ ಸಾಲವೂ ಇಲ್ಲ ಎಂದು ಹೇಳುವನೋ ಹಾಗು ನೀಡುವುದಿಲ್ಲವೋ ಆತನನ್ನು ನೀಚನೆಂದು ಭಾವಿಸು.
6. ಯಾರು ವಸ್ತುಗಳ ದುರಾಸೆಯುಳ್ಳವನೋ, ಜನರಿಗೆ ಹೊಡೆದು ಅದನ್ನು ದೋಚಿಕೊಳ್ಳುವನೋ, ಅವನನ್ನು ನೀಚನೆಂದು ಭಾವಿಸು.
7. ಯಾರು ತನ್ನ ಅಥವಾ ಪರರ ಹಣಕ್ಕಾಗಿ ಸುಳ್ಳು ಸಾಕ್ಷಿ ಹೇಳುವನೋ ಆತನನ್ನು ನೀಚನೆಂದು ಭಾವಿಸು.
8. ಯಾರು ಬಲತ್ಕಾರದಿಂದ ಅಥವಾ ಪ್ರೇಮದಿಂದ ಸೋದರ ಸಂಬಂಧಿಗಳ ಅಥವಾ ಮಿತ್ರರ ಸ್ತ್ರೀಯರೊಂದಿಗೆ ಕಾಣುವನೋ ಆತನನ್ನು ನೀಚನೆಂದು ತಿಳಿದುಕೊ.
9. ಯಾರು ಸಮರ್ಥನಾಗಿದ್ದರೂ ತನ್ನ ವೃದ್ಧ ತಾಯಿ-ತಂದೆಯರನ್ನು ಪೋಷಣೆ ಮಾಡುವುದಿಲ್ಲವೋ ಆತನನ್ನು ನೀಚನೆಂದು ತಿಳಿದುಕೊ.
10. ಯಾರು ತಾಯಿ-ತಂದೆ, ಸೋದರ, ಸೋದರಿ ಅಥವಾ ಅತ್ತೆಯರೊಂದಿಗೆ ಕ್ರೋಧಯುತ ಕಟು ವಚನದಿಂದ ನೋಯಿಸುವನೋ, ಹೊಡೆಯುವನೋ ಆತನನ್ನು ನೀಚನೆಂದು ತಿಳಿದುಕೊ.
11. ಯಾರು ಒಳ್ಳೆಯ ವಿಷಯವನ್ನು ಕೇಳಿದಾಗಲೂ ಕೆಟ್ಟ ಮಾರ್ಗವನ್ನು ತಿಳಿಸುತ್ತಾನೋ ಹಾಗು ಮಾತನ್ನು ತಿರುಗಿಸಿ ಸುತ್ತಾಡಿಸಿ ಆಡುತ್ತಾನೆಯೋ ಆತನನ್ನು ನೀಚನೆಂದು ತಿಳಿದುಕೊ.
12. ಯಾರು ಪಾಪಕರ್ಮವನ್ನು ಮಾಡಿ ನನ್ನನ್ನು ಹೀಗೆ ಭಾವಿಸದಿರಲಿ ಎಂದು ಇಚ್ಚಿಸುವನೋ ಹಾಗು ರಹಸ್ಯವಾಗಿ ಪಾಪಕರ್ಮ ಮಾಡುವವನೋ ಅವನನ್ನು ನೀಚನೆಂದು ಪರಿಗಣಿಸಲಿ.
13. ಯಾರು ಪರರ ಮನೆಗೆ ಹೋಗಿ ಸ್ವಾದಿಷ್ಟ ಭೋಜನ ಮಾಡಿ ಆತನು ಮನೆಗೆ ಬಂದರೆ ಆದರ, ಸತ್ಕಾರ ಮಾಡುವುದಿಲ್ಲವೋ ಆತನನ್ನು ನೀಚನೆಂದು ತಿಳಿಯಲಿ.
14. ಯಾರು ಬ್ರಾಹ್ಮಣ, ಸಮಣ ಅಥವಾ ಬೇರೆ ಯಾವುದೇ ಭಿಕ್ಷುವಿಗೆ ಸುಳ್ಳು ಹೇಳಿ ವಂಚಿಸುವನೋ ಆತನನ್ನು ನೀಚನೆಂದು ತಿಳಿಯಲಿ.
15. ಯಾರು ಭೋಜನದ ಸಮಯದಲ್ಲಿ ಬಂದಿರುವ ಬ್ರಾಹ್ಮಣ ಅಥವಾ ಸಮಣರಿಗೆ ಕ್ರೋಧದಿಂದ ನುಡಿಗಳನ್ನಾಡುವನೋ ಹಾಗು ಏನ್ನನ್ನೂ ನೀಡುವುದಿಲ್ಲವೋ ಆತನನ್ನು ನೀಚನೆಂದು ತಿಳಿಯಲಿ.
16. ಯಾರು ಮೋಹದಿಂದ ಮೋಹಿತನಾಗಿ ಯಾವುದೇ ವಸ್ತುವನ್ನು ಬಯಸುವನೋ, ಅದಕ್ಕಾಗಿ ಸುಳ್ಳು ಹೇಳುವನೋ ಆತನನ್ನು ನೀಚನೆಂದು ತಿಳಿದುಕೋ.
17. ಯಾರು ತನ್ನ ಪ್ರಶಂಸೆ ಮಾಡುತ್ತಾ, ಪರರ ನಿಂದೆ ಮಾಡುವನೋ ಹಾಗು ತನ್ನ ಅಭಿಮಾನದಿಂದ ಬೀಗಿ ಬಿಟ್ಟಿರುವನೋ ಆತನನ್ನು ನೀಚನೆಂದು ತಿಳಿದುಕೊ.
18. ಯಾರಲ್ಲಿ ಕ್ರೋಧ, ಜಿಪುಣತನ, ಕೆಟ್ಟ ಇಚ್ಛೆಗಳು ಸ್ವಾರ್ಥ, ಮೂರ್ಖತನ, ನಿರ್ಲಜ್ಜತೆ ಹಾಗು ಸಂಕೋಚವಿಲ್ಲದಿರುವಿಕೆ ಇದೆಯೋ ಆತನನ್ನು ನೀಚನೆಂದು ಬಾವಿಸು.
19. ಯಾರು ಬುದ್ಧರನ್ನು ಮತ್ತು ಅವರ ಭಿಕ್ಷುಗಳನ್ನು ಅಥವಾ ಗೃಹಸ್ಥ ಉಪಾಸಕರನ್ನು ನಿಂದಿಸುವನೋ ಆತನನ್ನು ನೀಚನೆಂದು ತಿಳಿದುಕೋ.
20. ಯಾರು ಅರಹಂತನಾಗದಿದ್ದರೂ ತನ್ನನ್ನು ಅರಹಂತನೆಂದು ಹೇಳಿಕೊಳ್ಳುವನೋ, ಆತನು ಬ್ರಹ್ಮಸಹಿತ ಸರ್ವ ಲೋಕದಲ್ಲಿ ಕಳ್ಳನಾಗಿದ್ದಾನೆ ಹಾಗೂ ಅವನು ಅಧಮನಾದ ನೀಚನಾಗಿರುತ್ತಾನೆ. ನಾನು ಇಷ್ಟು ನೀಚರನ್ನು ನಿನಗೆ ಹೇಳಿದ್ದೇನೆ.
21. ಯಾರು ಸಹಾ ಜನ್ಮ (ಜಾತಿ) ದಿಂದ ನೀಚರಾಗುವುದಿಲ್ಲ ಅಥವಾ ಬ್ರಾಹ್ಮಣನೂ ಆಗುವುದಿಲ್ಲ. ಕರ್ಮದಿಂದಲೇ ನೀಚನಾಗುತ್ತಾನೆ ಮತ್ತು ಕರ್ಮದಿಂದಲೇ ಬ್ರಾಹ್ಮಣ ಆಗುತ್ತಾನೆ.
22. ಈ ಉದಾಹರಣೆಯಿಂದ ತಿಳಿದುಕೋ, ಚಂಡಾಲಪುತ್ರ ಸೋಣಕನು ಮಾತಂಗ ಹೆಸರಿನಿಂದ ಪ್ರಸಿದ್ಧನಾಗಿದ್ದನು.
23. ಯಾವ ಮಹಾ ಯಶಸ್ಸನ್ನು ಮಾತಂಗನು ಪಡೆದಿದ್ದನೊ, ಅದು ಪರರಿಗಾಗಿ ಅತಿ ದುರ್ಲಭವಾಗಿತ್ತು. ಆತನಿಗೆ ಸೇವೆ ಮಾಡಲು ಅನೇಕ ಕ್ಷತ್ರಿಯರು ಹಾಗು ಬ್ರಾಹ್ಮಣರು ಬರುತ್ತಿದ್ದರು.
24. ಮಾತಂಗನು ಕಾಮರಾಗವನ್ನು ತ್ಯಜಿಸಿ ದಿವ್ಯರಥದಲ್ಲಿ ಸವಾರನಾಗಿ, ಶುದ್ಧ ಮಹಾಪಥದಿಂದ ಬ್ರಹ್ಮಲೋಕದಲ್ಲಿ ಜನಿಸಿದನು. ಅವನು ಬ್ರಹ್ಮಲೋಕದಲ್ಲಿ ಜನಿಸಲು ಯಾವ ಜಾತಿಯು ಅಡ್ಡಿಯಾಗಲಿಲ್ಲ.
25. ಯಾರು ಶಾಸ್ತ್ರಪಾಠಗಳನ್ನು, ಮಂತ್ರಗಳನ್ನು ಮನೆಯಲ್ಲಿ ಅರಿತು ಬ್ರಾಹ್ಮಣರಾಗಿದ್ದಾರೋ, ಅವರು ಸಹಾ ನಿತ್ಯ ಪಾಪಕರ್ಮಗಳಲ್ಲಿ ಮಗ್ನರಾಗಿರುವುದು ಕಂಡುಬರುತ್ತದೆ.
26. ಈ ಜನ್ಮದಲ್ಲಿಯೇ ಅವರಿಗೆ ನಿಂದೆ ಪ್ರಾಪ್ತಿಯಾಗುತ್ತದೆ ಹಾಗು ಪರಲೋಕದಲ್ಲಿ ದುರ್ಗತಿ ಪ್ರಾಪ್ತಿಯಾಗುವುದು. ಅವರ ದುರ್ಗತಿ ಹಾಗು ನಿಂದೆಯನ್ನು ಜಾತಿ ತಪ್ಪಿಸಲಾರದು.
27. ಜಾತಿಯಿಂದ ಯಾರು ಸಹಾ ವಸಲ (ನೀಚ) ನಾಗುವುದಿಲ್ಲ. ಜಾತಿಯಿಂದ ಯಾರು ಸಹಾ ಬ್ರಾಹ್ಮಣನಾಗುವುದಿಲ್ಲ. ಕರ್ಮದಿಂದಲೇ ವಸಲ (ನೀಚ) ನಾಗುತ್ತಾನೆ ಮತ್ತು ಕರ್ಮದಿಂದಲೇ ಬ್ರಾಹ್ಮಣನಾಗುತ್ತಾನೆ.
ಹೀಗೆ ಹೇಳಿದ ನಂತರ ಅಗ್ನಿ ಭಾರದ್ವಾಜನು ಬುದ್ಧ ಭಗವಾನರಿಗೆ ಈ ರೀತಿ ಹೇಳಿದನು- ನಿಜಕ್ಕೂ ಆಶ್ಚರ್ಯ ಗೋತಮರೆ ! ಆಶ್ಚರ್ಯವಾಯಿತು ! ಹೇಗೆಂದರೆ ತಲೆಕೆಳಗಿರುವ ಪಾತ್ರೆಯನ್ನು ಸರಿಯಾಗಿಸುವಂತೆ, ಮುಚ್ಚಿರುವುದನ್ನು ತೆಗೆದು ತೋರಿಸುವಂತೆ, ದಾರಿ ತಪ್ಪಿರುವವರಿಗೆ ದಾರಿ ತೋರಿಸುವಂತೆ, ಅಂಧಕಾರದಲ್ಲಿರುವವರಿಗೆ ದೀಪ ಪ್ರಕಾಶಿಸುವಂತೆ, ಯಾವುದರಿಂದ ಚಕ್ಷುಧಾರಿಗಳು ರೂಪಗಳನ್ನು (ವಸ್ತು) ನೋಡುವರೋ ಹಾಗೆಯೇ ಭಗವಾನ್ ಬುದ್ಧರಿಂದ ಅನೇಕ ರೀತಿಯಿಂದ ಧಮ್ಮವು ಪ್ರಕಾಶಿತವಾಯಿತು. ನಾನು ಇಂದಿನಿಂದ ಬುದ್ಧರ ಶರಣು ಹೋಗುತ್ತೇನೆ, ಧಮ್ಮ ಹಾಗು ಸಂಘಕ್ಕೂ ಶರಣು ಹೋಗುತ್ತೇನೆ. ನನಗೆ ಜೀವನಪರ್ಯಂತ ಉಪಾಸಕನಾಗಿ ಮಾಡಿಕೊಳ್ಳಿ ಭಗವಾನ್.
ಇಲ್ಲಿಗೆ ವಸಲ ಸುತ್ತ ಮುಗಿಯಿತು.

paraabhava sutta in kannada (12 causes of downfall)

6. ಪರಾಭವ ಸುತ್ತ
(ವ್ಯಕ್ತಿಯ ಅವನತಿಯ ಹನ್ನೆರಡು ಕಾರಣಗಳು)
ನಾನು ಹೀಗೆ ಕೇಳಿದ್ದೇನೆ. ಒಮ್ಮೆ ಭಗವಾನರು ಶ್ರಾವಸ್ಥಿಯಲ್ಲಿ ಅನಾಥಪಿಂಡಿಕನ ಜೇತವನ ಆರಾಮದಲ್ಲಿ ವಿಹರಿಸುತ್ತಿದ್ದರು. ಆ ಸಮಯದಲ್ಲಿ ದೇವತೆಯು ರಾತ್ರಿ ಮುಗಿಯುತ್ತಿದ್ದಂತೆ ತನ್ನ ತೇಜಸ್ಸಿನಿಂದ ಸಮಸ್ತ ಜೇತವನವನ್ನು ಬೆಳಗಿಸುವಂತಹ ಪ್ರಕಾಶವನ್ನು ಹರಡುತ್ತಾ ಎಲ್ಲಿ ಭಗವಾನರು ಇದ್ದರೋ ಅಲ್ಲಿ ಬಂದನು. ಬಂದು ಭಗವಾನರಿಗೆ ಅಭಿವಂದನೆ ಸಲ್ಲಿಸಿ ಒಂದುಕಡೆ ನಿಂತನು. ಹಾಗೆ ನಿಂತ ದೇವತೆಯು ಭಗವಾನರಿಗೆ ಗಾಥೆಗಳಿಂದ ಹೀಗೆ ಹೇಳಿದನು-
1. ನಾನು ಗೋತಮರ ಬಳಿ ಅವನತಿಯ ಕಡೆ ಹೋಗುತ್ತಿರುವ ಪುರುಷನ ವಿಷಯ ಕೇಳುತ್ತಿದ್ದೇನೆ. ಇದನ್ನು ಕೇಳಲೆಂದು ನಾನು ಭಗವಾನರ ಬಳಿ ಬಂದಿದ್ದೇನೆ. ಅವನತಿಯ ಕಾರಣವೇನು?
2. ಭಗವಾನರು- ಉನ್ನತಿಗಾಮಿಯು ಸುಲಭವಾಗಿ ಕಾಣುತ್ತಾನೆ, ಹಾಗೆಯೇ ಅವನತಿಗಾಮಿಯು ಸುಲಭವಾಗಿ ಕಾಣುತ್ತಾನೆ. ಧಮ್ಮಕಾಮಿಯು ಉನ್ನತನು, ಧಮ್ಮದ್ವೇಷಿಯೇ ಅವನತಿಯುಳ್ಳವನು.
3. ದೇವತೆ - ಈ ಪ್ರಕಾರದಿಂದ ಅವನತಿಯ ಪ್ರಥಮ ಕಾರಣವನ್ನು ನಾನು ಅರಿತೆನು. ಭಗವಾನರು ದ್ವಿತೀಯ ಕಾರಣವನ್ನು ತಿಳಿಸಲಿ.
4. ಭಗವಾನರು ಯಾರಿಗೆ ದುರ್ಜನರು ಪ್ರಿಯರೋ, ಸಜ್ಜನರು ಇಷ್ಟವಿಲ್ಲವೋ, ಅಸತ್ಪುರುಷರ ಧಮ್ಮವನ್ನು ಇಷ್ಟಪಡುವನೋ ಇದೇ ಅವನ ಅವನತಿಯ ಕಾರಣವಾಗಿದೆ.
5. ದೇವತೆ - ಈ ರೀತಿಯಾಗಿ ಪರಾಭವದ ಎರಡನೇ ಕಾರಣವನ್ನು ನಾನು ಅರಿತೆನು, ಭಗವಾನರು ಪರಾಭವದ ಮೂರನೇ ಕಾರಣವನ್ನು ತಿಳಿಸಲಿ.
6. ಭಗವಾನರು - ಯಾವ ವ್ಯಕ್ತಿ ಅತಿ ನಿದ್ರಾವಂತನೋ, ಗುಂಪು ಜೊತೆಗಳಲ್ಲಿ ಉನ್ಮತ್ತನಾಗಿರುವನೋ, ಪರಿಶ್ರಮವನ್ನು ಪಡುವುದಿಲ್ಲವೋ, ಸೋಮಾರಿ ಹಾಗು ಕ್ರೋದಿಯೋ ಅದೇ ಅವನ ಪರಾಭವದ ಕಾರಣವಾಗಿದೆ.
7. ದೇವತೆ - ಈ ಪ್ರಕಾರದಿಂದ ಪರಾಭವದ ಮೂರನೆಯ ಕಾರಣವನ್ನು ನಾನು ಅರಿತೆನು. ಭಗವಾನರು ಪರಾಭವದ ನಾಲ್ಕನೆಯ ಕಾರಣವನ್ನು ತಿಳಿಸಲಿ.
8. ಭಗವಾನರು - ಯಾರು ಸಮರ್ಥನಾಗಿದ್ದರೂ ವೃದ್ಧರಾದ ತಾಯಿ-ತಂದೆಯರನ್ನು ಸಾಕುವುದಿಲ್ಲವೋ, ಅದೇ ಆತನ ಪರಾಭವದ ಕಾರಣವಾಗಿದೆ.
9. ದೇವತೆ - ಈ ಪ್ರಕಾರದಿಂದ ಪರಾಭವದ ನಾಲ್ಕನೆಯ ಕಾರಣವನ್ನು ನಾನು ಅರಿತೆನು. ಭಗವಾನರು ಪರಾಭವದ ಐದನೆಯ ಕಾರಣವನ್ನು ತಿಳಿಸಲಿ.
10. ಭಗವಾನರು - ಯಾರು ಬ್ರಾಹ್ಮಣರಿಗೆ, ಸಮಣರಿಗೆ ಅಥವಾ ಪರ ಯಾಚಕರಿಗೆ ಸುಳ್ಳು ಹೇಳಿ ವಂಚಿಸುತ್ತಾನೋ ಅದು ಆತನ ಪರಾಭವದ ಕಾರಣವಾಗಿದೆ.
11. ದೇವತೆ - ಈ ಪ್ರಕಾರದಿಂದ ಪರಾಭವದ ಐದನೆಯ ಕಾರಣವನ್ನು ನಾನು ಅರಿತೆನು. ಭಗವಾನರು ಪರಾಭವದ ಆರನೆಯ ಕಾರಣವನ್ನು ತಿಳಿಸಲಿ.
12. ಭಗವಾನರು - ಅತ್ಯಂತ ಶ್ರೀಮಂತನಾಗಿದ್ದರೂ, ಚಿನ್ನ ಹಾಗು ಆಹಾರದಿಂದ ಸಂಪನ್ನನಾಗಿದ್ದರೂ, ಸ್ವಾಥರ್ಿಯಾಗಿ ಒಬ್ಬನೇ ಸ್ವಾದಿಷ್ಟ ಭೋಜನ ಮಾಡುತ್ತಾನೋ, ಅದೇ ಅವನ ಪರಾಭವದ ಕಾರಣವಾಗಿದೆ.
13. ದೇವತೆ - ಈ ಪ್ರಕಾರದಿಂದ ಅವನತಿಯ ಆರನೆಯ ಕಾರಣವನ್ನು ನಾನು ಅರಿತೆನು. ಭಗವಾನರು ಅವನತಿಯ ಏಳನೆಯ ಕಾರಣವನ್ನು ತಿಳಿಸಲಿ.
14. ಭಗವಾನರು - ಯಾರು ಜಾತಿ, ಧನ ಹಾಗು ಗೋತ್ರದ ಮದದಿಂದ ತುಂಬಿರುವನೋ, ತನ್ನ ಸೋದರ ಬಂಧುಗಳನ್ನು ಸಹಾ ಜಾತಿಯ ಕಾರಣದಿಂದ ಅನಾಧರಣೆ ಮಾಡುವನೋ, ಅದು ಆತನ ಪರಾಭವದ ಕಾರಣವಾಗಿದೆ.
15. ದೇವತೆ - ಈ ಪ್ರಕಾರದಿಂದ ಪರಾಭವದ ಏಳನೆಯ ಕಾರಣವನ್ನು ನಾನು ಅರಿತೆನು. ಭಗವಾನರು ಪರಾಭವದ ಎಂಟನೆಯ ಕಾರಣವನ್ನು ತಿಳಿಸಲಿ.
16. ಭಗವಾನರು - ಯಾವ ವ್ಯಕ್ತಿ ಸ್ತ್ರೀಯರ ಹಿಂದೆ ಬಿದ್ದಿರುವನೋ, ಕುಡುಕನೋ ಹಾಗು ಜೂಜುಕೋರನೋ, ಸಂಪಾದಿಸಿದ ಸರ್ವ ಧನವನ್ನು ನಷ್ಟ ಮಾಡಿರುವನೋ ಅದೇ ಆತನ ಪರಾಭವದ ಕಾರಣವಾಗಿದೆ.
17. ದೇವತೆ - ಈ ಪ್ರಕಾರದಿಂದ ಪರಾಭವದ ಎಂಟನೆಯ ಕಾರಣವನ್ನು ನಾನು ಅರಿತೆನು. ಭಗವಾನರು ಪರಾಭವದ ಒಂಬತ್ತನೆಯ ಕಾರಣವನ್ನು ತಿಳಿಸಲಿ.
18. ಭಗವಾನರು - ಯಾರು ತನ್ನ ಪತ್ನಿಯಿಂದ ಅಸಂತುಷ್ಟನಾಗಿ ವೇಶ್ಯೆಯರ ಹಾಗು ಪರಸ್ತ್ರೀಯರೊಂದಿಗೆ ಕಾಣಿಸುತ್ತಾನೋ ಅದು ಆತನ ಪರಾಭವದ ಕಾರಣವಾಗಿದೆ.
19. ದೇವತೆ - ಈ ಪ್ರಕಾರದಿಂದ ಪರಾಭವದ ಒಂಬತ್ತನೆಯ ಕಾರಣವನ್ನು ನಾನು ಅರಿತೆನು. ಭಗವಾನರು ಪರಾಭವದ ಹತ್ತನೆಯ ಕಾರಣವನ್ನು ತಿಳಿಸಲಿ.
20. ಭಗವಾನರು - ಯಾವ ವೃದ್ಧನು ನವ ಯುವತಿಯನ್ನು ವಿವಾಹವಾಗಿ, ಆಕೆಯ ಮೇಲೆ ಸಂಶಯ, ಈಷರ್ೆಯಿಂದ ಸರಿಯಾಗಿ ನಿದ್ರಿಸಲಾರನೋ, ಇದು ಆತನ ಪರಾಭವದ ಕಾರಣವಾಗಿದೆ.
21. ದೇವತೆ - ಈ ಪ್ರಕಾರದಿಂದ ಪರಾಭವದ ಹತ್ತನೆಯ ಕಾರಣವನ್ನು ನಾನು ಅರಿತೆನು. ಭಗವಾನರು ಪರಾಭವದ ಹನ್ನೊಂದನೆಯ ಕಾರಣವನ್ನು ತಿಳಿಸಲಿ.
22. ಭಗವಾನರು - ದುರಾಸೆ ಅಥವಾ ಸಂಪತ್ತನ್ನು ನಷ್ಟ ಮಾಡುವಂತಹ ಸ್ತ್ರೀ ಅಥವಾ ಪುರುಷನನ್ನು ಸಂಪತ್ತಿನ ಒಡೆಯನನ್ನಾಗಿ ಮಾಡಿದರೆ ಅದು ಆತನ ಪರಾಭವದ ಕಾರಣವಾಗಿದೆ.
23. ದೇವತೆ - ಈ ಪ್ರಕಾರದಿಂದ ಪರಾಭವದ ಹನ್ನೊಂದನೆಯ ಕಾರಣವನ್ನು ನಾನು ಅರಿತೆನು. ಭಗವಾನರು ಪರಾಭವದ ಹನ್ನೆರಡನೆಯ ಕಾರಣವನ್ನು ತಿಳಿಸಲಿ.
24. ಭಗವಾನರು - ಕ್ಷತ್ರಿಯ ಕುಲದಲ್ಲಿ ಜನಿಸಿದ ಅಲ್ಪ ಸಂಪತ್ತಿನವನು ಹಾಗು ಮಹಾ ದುರಾಸೆಪೀಡಿತ ಪುರುಷ ರಾಜ್ಯದ ಆಸೆಪಟ್ಟರೆ ಅದು ಆತನ ಅವನತಿಯ ಕಾರಣವಾಗಿದೆ.
25. ವ್ಯಕ್ತಿಯ ಈ ಪರಾಭವದ ಕಾರಣಗಳನ್ನು ಬುದ್ಧಿವಂತನಾದ ಆರ್ಯ ವ್ಯಕ್ತಿಯು ಅರಿತು ನಡೆದರೆ ಸುಗತಿ ಪ್ರಾಪ್ತಿಮಾಡಿಕೊಳ್ಳುತ್ತಾನೆ.
ಇಲ್ಲಿಗೆ ಪರಾಭವ ಸುತ್ತ ಮುಗಿಯಿತು.

chunda sutta in kannada (4 kinds of monks )


5. ಚುಂದ ಸುತ್ತ
(ನಾಲ್ಕು ರೀತಿಯ ಸಮಣರು)
1. ಚುಂದ ಕಮ್ಮಾರ ಪುತ್ರ - ಮಹಾ ಪ್ರಾಜ್ಞಾವಂತ ಮುನಿ, ಧಮ್ಮಸ್ವಾಮಿ, ತೃಷ್ಣಾರಹಿತರು, ಮನುಷ್ಯರಲ್ಲಿ ಉತ್ತಮರು ಹಾಗು ಸಾರಥಿಗಳಲ್ಲಿ ಶ್ರೇಷ್ಠರಾದ ತಮ್ಮನ್ನು ಕೇಳುತ್ತೇನೆ. ಲೋಕದಲ್ಲಿ ಎಷ್ಟು ಬಗೆಯ ಸಮಣರಿದ್ದಾರೆ? ದಯವಿಟ್ಟು ಇದನ್ನು ತಿಳಿಸಿರಿ.
2. ಬುದ್ಧ ಭಗವಾನರು - ನಾಲ್ಕು ಪ್ರಕಾರದ ಸಮಣರಿದ್ದಾರೆ. ಐದನೆಯವರಿಲ್ಲ. ನೀನು ಕೇಳಿದಷ್ಟು ನಾನು ಹೇಳಿರುವೆ. ಅವೆಂದರೆ: (1) ಮಾರ್ಗಜಿನ (2) ಮಾರ್ಗದೇಶಿಕ (3) ಮಾರ್ಗಜೀವಿ (4) ಮಾರ್ಗದೂಷಿ.
3. ಚುಂದ ಕಮ್ಮಾರ ಪುತ್ರ - ಭಗವಾನರೇ, ಮಾರ್ಗಜಿನರೆಂದು ಯಾರಿಗೆ ಹೇಳುತ್ತಾರೆ? ಅತುಲನಿಯ ಮಾರ್ಗದೇಶಿಕರು ಹೇಗಿರುತ್ತಾರೆ? ನಾನು ಕೇಳಿದ್ದಕ್ಕಾಗಿ ಮಾರ್ಗಜೀವಿ ಹಾಗು ಮಾರ್ಗದೂಷಿಯವರನ್ನು ತಿಳಿಸಿ, ಪ್ರಕಟಪಡಿಸಿ.
4. ಭಗವಾನರು - ಯಾರು ಸಂದೇಹರಹಿತರೋ, ಸಂಸಾರದ ಮುಳ್ಳುಗಳಿಂದ ಮುಕ್ತರೋ, ನಿಬ್ಬಾಣದಲ್ಲಿ ಲೀನರೋ, ಆಸಕ್ತಿರಹಿತರೋ, ದೇವತೆಗಳ ಸಹಿತವಾಗಿ ಲೋಕನಾಥರೋ ಅವರನ್ನು ಬುದ್ಧರು ಮಾರ್ಗಜಿನ ಎನ್ನುತ್ತಾರೆ.
5. ಯಾರು ಪರಮಾರ್ಥವನ್ನು ಇಲ್ಲಿ ಅರಿತು ಇಲ್ಲಿಯೇ ಧಮ್ಮವನ್ನು ತಿಳಿಸುವರೋ ಹಾಗು ಅದರ ವ್ಯಾಖ್ಯಾನವನ್ನು ಮಾಡುವರೋ, ಅಂತಹ ಸಂದೇಹರಹಿತ, ತೃಷ್ಣಾಮುಕ್ತಿ ಮುನಿಯಾದ ಎರಡನೆಯವರನ್ನು ಮಾರ್ಗದಶರ್ಿ ಎಂದು ಹೇಳಲ್ಪಡುವರು.
6. ಯಾರು ಸುಉಪದೇಶಿತವಾದ ಧಮ್ಮಪದದ ಅನುಸಾರವಾಗಿ ಸಂಯಮಿತರಾಗಿ, ಹಾಗು ಸ್ಮೃತಿವಂತರಾಗಿ, ಮಾರ್ಗದಲ್ಲಿ ಜೀವಿಸುವರೋ, ನಿದರ್ೊಷಯುತ ಧಮ್ಮವನ್ನು ಪಾಲನೆ ಮಾಡುವರೋ ಆ ತೃತೀಯರನ್ನು ಮಾರ್ಗಜೀವಿ ಎನ್ನುತ್ತಾರೆ.
7. ಯಾರು ಶ್ರೇಷ್ಠ (ಕಾಷಾಯ) ವಸ್ತ್ರವನ್ನು ಧರಿಸಿಕೊಂಡು ಪಾಖಂಡಿ, ಕುಲದೂಷಿಕ, ವಂಚಕ, ಮಾಯಾವಿ, ಅಸಂಯಮಿ ಹಾಗು ಬಾಯಿಬಡುಕನಾಗಿರುವನೋ ಅಂತಹವನೇ ಮಾರ್ಗದೂಷಿಯಾಗಿರುತ್ತಾನೆ.
8. ಯಾರು ಪ್ರಜ್ಞಾವಂತರೋ, ಶ್ರುತವಂತರೋ ಅಂತಹ ಆರ್ಯಶ್ರಾವಕ ಗೃಹಸ್ಥರು ಇಂತಹವರನ್ನು ಕಂಡು ಎಲ್ಲರೂ ಈ ರೀತಿ (ಕಪಟಿ) ಇರುವುದಿಲ್ಲ. ಇದನ್ನು ಅರಿತು ಹಾಗು ಕಂಡು ತನ್ನ ಶ್ರದ್ಧೆ ಕ್ಷೀಣಿಸುವುದಿಲ್ಲ. ಹೇಗೆ ತಾನೇ ದುಷ್ಟರು ಶ್ರೇಷ್ಠರ ಸಮಾನವಾಗುತ್ತಾರೆ ಅಥವಾ ಅಶುದ್ಧರು ಶುದ್ಧರ ಸಮವಾಗುತ್ತಾರೆ?
ಇಲ್ಲಿಗೆ ಚುಂದ ಸುತ್ತ ಮುಗಿಯಿತು.

kasi bhaaradvaaja sutta in kannada( the cultivation of Buddha)

.
4. ಕಸಿ ಭಾರದ್ವಾಜ ಸುತ್ತ
(ಇದರಲ್ಲಿ ಭಗವಾನರು ಸಹಾ ಕೃಷಿಕರೆಂದು ಹೇಳಿಕೊಂಡಿದ್ದಾರೆ ಹಾಗೂ ಅವರ ಕೃಷಿ ಏನು?)
ಹೀಗೆ ನಾನು ಕೇಳಿದ್ದೇನೆ. ಒಂದು ಸಮಯದಲ್ಲಿ ಭಗವಾನರು ಮಗಧದ ದಕ್ಷಿಣಾಗಿರಿಯಲ್ಲಿ ಏಕನಾಲ ಹೆಸರಿನ ಬ್ರಾಹ್ಮಣರ ಗ್ರಾಮದಲ್ಲಿ ವಿಹಾರ ಮಾಡುತ್ತಿದ್ದರು. ಆ ಸಮಯದಲ್ಲಿ ಕೃಷಿ ಭಾರದ್ವಾಜ ಬ್ರಾಹ್ಮಣನು 500 ನೇಗಿಲುಗಳೊಡನೆ ಕೃಷಿ ಕಾರ್ಯದಲ್ಲಿ ತಲ್ಲೀನನಾಗಿದ್ದನು. ಆಗ ಭಗವಾನರು ಪೂವರ್ಾಹ್ನ ಸಮಯದಲ್ಲಿ ಚೀವರವನ್ನು ಧರಿಸಿ ಪಿಂಡಪಾತ್ರೆಯನ್ನು ಎತ್ತಿಕೊಂಡು ಎಲ್ಲಿ ಕೃಷಿ ಭಾರದ್ವಾಜನಿದ್ದನೋ ಅಲ್ಲಿಗೆ ಬಂದರು. ಆ ಸಮಯದಲ್ಲಿ ಕೃಷಿ ಭಾರದ್ವಾಜನು ಆಳುಗಳಿಗೆ ಭೋಜನವನ್ನು ಹಾಕಿಸುತ್ತಿದ್ದನು. ಕೃಷಿ ಭಾರದ್ವಾಜನು ಭಗವಾನರು ಭೋಜನಕ್ಕಾಗಿ ನಿಂತಿರುವುದು ಕಂಡು ಭಗವಾನರಿಗೆ ಹೀಗೆ ಹೇಳಿದನು-
ಹೇ ಸಮಣ, ನಾನು ಬಿತ್ತುತ್ತೇನೆ ಹಾಗು ಊಳುತ್ತೇನೆ, ಬಿತ್ತಿ ಹಾಗು ಊಳಿ ತಿನ್ನುತ್ತೇನೆ, ಹೇ ಸಮಣ, ನೀನು ಸಹಾ ಬಿತ್ತಿ, ಊಳಿ ತಿನ್ನು ಎಂದನು.
ಭಗವಾನರು ಬ್ರಾಹ್ಮಣನೇ, ನಾನು ಸಹಾ ಊಳುತ್ತೇನೆ ಹಾಗು ಬಿತ್ತಿ ಬೆಳೆಯುತ್ತೇನೆ, ಊಳಿ ಹಾಗು ಬಿತ್ತಿ ತಿನ್ನುತ್ತೇನೆ ಎಂದರು.
ನಾವಂತು ಗೋತಮರ ನೊಗ, ನೇಗಿಲು, ಗುಳ ಅಥವಾ ಎತ್ತುಗಳನ್ನು ನೋಡುತ್ತಿಲ್ಲ. ಆದರೂ ಗೋತಮರು ಹೀಗೆ ಹೇಳುತ್ತಾರೆ: ಹೇ ಬ್ರಾಹ್ಮಣನೇ, ನಾನು ಸಹಾ ಊಳುತ್ತೇನೆ ಹಾಗು ಬಿತ್ತಿ ಬೆಳೆಯುತ್ತೇನೆ, ಊಳಿ ಹಾಗು ಬಿತ್ತಿ ತಿನ್ನುತ್ತೇನೆ ಎಂದು.
ಹಾಗೆಯೇ ಕೃಷಿಕ ಭಾರದ್ವಾಜನು ಗಾಥೆಯಲ್ಲಿ ಭಗವಾನರೊಂದಿಗೆ ಹೀಗೆ ಹೇಳಿದನು-
1. ತಮ್ಮೊಂದಿಗೆ ತಾವು ಕೃಷಿಕರೆಂದು ಹೇಳುವಿರಿ, ಆದರೆ ಕೃಷಿಯಲ್ಲಿರುವ ತಮ್ಮನ್ನು ನೋಡಿಲ್ಲ ನಾನೆಂದು, ಕೇಳುವ ನಮಗೆ ತಮ್ಮ ಕೃಷಿಯನ್ನು ಹೇಳಿರಿ ನಾವು ಸಹಾ ಅದರಿಂದ ತಮ್ಮನ್ನು ಕೃಷಿಕರೆಂದು ಭಾವಿಸುತ್ತೇವೆ.
ಭಗವಾನರು ಪ್ರತಿ ಗಾಥೆಗಳನ್ನು ನುಡಿದರು-
2. ಶ್ರದ್ದೇಯೇ ನನ್ನ ಬೀಜವಾಗಿದೆ, ತಪವೇ ನನ್ನ ಮಳೆ, ಪ್ರಜ್ಞೆಯೇ ನನ್ನ ನೊಗ ಹಾಗು ನೇಗಿಲು, ಲಜ್ಜೆಯೇ ನೊಗದ ದಂಡ, ಚಿತ್ತವೇ ಹೂಳಲ್ಪಡುವುದಾಗಿದೆ, ಸ್ಮೃತಿಯೇ ನನ್ನ ಗುಳವಾಗಿದೆ.
3. ಶರೀರದಿಂದ ಸಂಯಮದಿಂದಿದ್ದೇನೆ, ವಚನದಿಂದಲೂ ನಿಗ್ರಹದಿಂದಿದ್ದೇನೆ, ಭೋಜನ ಹಾಗು ಹೊಟ್ಟೆಯ ಬಗ್ಗೆ ಮಿತವಾಗಿದ್ದೇನೆ. ನಾನು ಸತ್ಯದ ಕಳೆ ತೆಗೆಯುತ್ತೇನೆ. ಅರಹತ್ವದ ಪ್ರಾಪ್ತಿಯನ್ನೇ ಬೆಳೆಯಾಗಿ ಪಡೆಯುವುದಾಗಿದೆ.
4. ಪ್ರಯತ್ನಶೀಲತೆಯೇ ನನ್ನ ಎತ್ತುಗಳಾಗಿವೆ ಹಾಗು ನಿಬ್ಬಾಣಕ್ಕೆ ಬಂಡಿಯಾಗಿದೆ. ನನ್ನ ಬಂಡಿಯು ಕ್ಷಣವೂ ನಿಲ್ಲದೆ ಚಲಿಸುತ್ತಿರುತ್ತದೆ ಹಾಗು ತಲುಪುತ್ತಿರುವ ಕಡೆ ಹೋಗಿ ನಂತರ ಶೋಕ ಪಡಬೇಕಾಗಿಲ್ಲ.
5. ಈ ಪ್ರಕಾರದ ಕೃಷಿಕ ಫಲದಾಯಕವಾಗಿದೆ. ಈ ಕೃಷಿಯಿಂದ ಮನುಷ್ಯ ಸರ್ವ ದುಃಖದಿಂದ ಮುಕ್ತನಾಗುತ್ತಾನೆ.
ಆಗ ಕೃಷಿ ಭಾರದ್ವಾಜ ಬ್ರಾಹ್ಮಣನು ಒಂದು ದೊಡ್ಡ ಕಂಚಿನ ಪಾತ್ರೆಯಲ್ಲಿ ಪಾಯಸವನ್ನು ತುಂಬಿಸಿ, ಭಗವಾನರ ಬಳಿ ತಂದು ಹೀಗೆ ಹೇಳಿದನು- ಗೋತಮರೇ, ತಾವು ಪಾಯಸ ತಿನ್ನಿ, ತಾವು ಕೃಷಿಕರಾಗಿದ್ದೀರಿ, ಅಮರತ್ವದ ಫಲವುಳ್ಳ ಕೃಷಿಯನ್ನು ತಾವು ಮಾಡುವಂತಹವರಾಗಿದ್ದೀರಿ ಎಂದನು.
6. ಭಗವಾನರು ಧಮ್ಮೋಪದೇಶದ ನಂತರದ ಭೋಜನ ನನಗೆ ಅಭೋಜನವಾಗಿದೆ ಬ್ರಾಹ್ಮಣ, ಬಹಳ ಪ್ರಾಜ್ಞರಿಗೆ ಇದು ಧಮ್ಮವಲ್ಲ, ಬುದ್ಧರು ಧಮ್ಮೋಪದೇಶದ ನಂತರ ಭೋಜನವನ್ನು ತ್ಯಜಿಸುತ್ತಾರೆ. ಬ್ರಾಹ್ಮಣ ಧಮ್ಮದಿಂದ ಶೋಭಿಸುತ್ತಿರುವವರಿಗೆ ಇದೇ ರೀತಿಯಾಗಿದೆ.
7. ಜ್ಞಾನಿ, ಮಹಷರ್ಿ, ಕ್ಷೀಣಾಸ್ರವ ಹಾಗು ಚಂಚಲ್ಯರಹಿತರಾದ ನನಗಾಗಿ ಬೇರೆಯೇ ಅನ್ನ ಹಾಗು ಪೇಯ ನೀಡು, ಪುಣ್ಯ ಅಪೇಕ್ಷೆಗೆ ಇದು (ಬುದ್ಧರಿಗೆ ದಾನ) ಅತ್ಯುತ್ತಮ ಕ್ಷೇತ್ರವಾಗಿದೆ.
ಹಾಗಾದರೆ ಗೋತಮರೇ, ಈ ಪಾಯಸವನ್ನು ನಾನು ಯಾರಿಗಾಗಿ ನೀಡಲಿ.
ಬ್ರಾಹ್ಮಣ, ದೇವತೆಗಳ ಸಹಿತ ಸರ್ವ ಲೋಕದಲ್ಲಿ ತಥಾಗತರು ಮತ್ತು ತಥಾಗತರ ಶಿಷ್ಯರ ವಿನಃ ಮತ್ಯಾವ ಸಮಣ, ಬ್ರಾಹ್ಮಣ, ಬ್ರಹ್ಮ, ದೇವ ಹಾಗು ದೇವಮನುಷ್ಯರಲ್ಲಿ ಯಾರೂ ಇದನ್ನು ತಿಂದು ಜೀಣರ್ಿಸುವವರನ್ನು ನಾನು ಕಾಣುತ್ತಿಲ್ಲ. ಆದ್ದರಿಂದ ಬ್ರಾಹ್ಮಣ ನೀನು ಇದನ್ನು ಸಸ್ಯರಹಿತ ಭೂಮಿ ಅಥವಾ ಜೀವರಹಿತ ಜಲದಲ್ಲಿ ಸುರಿದುಬಿಡು.
ಆಗ ಕೃಷಿಕ ಭಾರದ್ವಾಜನು ಆ ಪಾಯಸನ್ನು ಜೀವರಹಿತ ಜಲದಲ್ಲಿ ಮುಳುಗಿಸಿಬಿಟ್ಟನು. ಆಗ ಆ ಪಾಯಸವು ನೀರಿನಲ್ಲಿ ಬೀಳುತ್ತಿದ್ದಂತೆ ಚಟಪಟನೆ ಸದ್ದು ಮಾಡುತ್ತಾ ಹೊಗೆ ಎದ್ದಿತು. ಹೇಗೆ ಕಬ್ಬಿಣದ ಸರಳನ್ನು ದಿನವೆಲ್ಲಾ  ಅಗ್ನಿಗೆ ಕೊಟ್ಟು, ಬಿಸಿಮಾಡಿ ಜಲದಲ್ಲಿ ಅದ್ದಿದಾಗ ಶಬ್ದ ಹೊರಬಂದು ಹೊಗೆ ಏಳುವುದೋ ಹಾಗೆಯೇ ಪಾಯಸವನ್ನು ನೀರಿಗೆ ಹಾಕಿದಾಗ ಚಟಪಟನೆ ಶಬ್ದವಾಗಿ ಹೊಗೆ ಎದ್ದಿತು. ಆಗ ಕೃಷಿಕ ಭಾರದ್ವಾಜನು ಸಂವಿಘ್ನನಾದನು, ರೋಮಾಂಚಿತನಾದನು.
ಭಗವಾನರು ಎಲ್ಲಿದ್ದರೋ ಅಲ್ಲಿ ಹೋದನು. ನಂತರ ಭಗವಾನರ ಪಾದಕಮಲದಲ್ಲಿ ತನ್ನ ತಲೆಯಿಟ್ಟು ವಂದಿಸಿ ಈ ರೀತಿ ಹೇಳಿದನು- ಹೇ ಗೋತಮರೇ, ಆಶ್ಚರ್ಯ ! ಆಶ್ಚರ್ಯವಾಯಿತು ! ಹೇಗೆಂದರೆ ತಲೆಕೆಳಗಿರುವ ಪಾತ್ರೆಯನ್ನು ಸರಿಯಾಗಿಸುವಂತೆ, ಮುಚ್ಚಿರುವುದನ್ನು ತೆಗೆದು ತೋರಿಸುವಂತೆ, ದಾರಿ ತಪ್ಪಿರುವವರಿಗೆ ದಾರಿ ತೋರಿಸುವಂತೆ, ಅಂಧಕಾರದಲ್ಲಿರುವವರಿಗೆ ದೀಪ ತೋರಿಸುವಂತೆ, ಕಣ್ಣಿರುವವನಿಗೆ ವಸ್ತುಗಳನ್ನು ತೋರಿಸುವಂತೆ. ಹಾಗೆಯೇ ಪರಮಶ್ರೇಷ್ಠ ಭಗವಾನರಿಂದ ಅನೇಕ ರೀತಿಯಲ್ಲಿ ಧಮ್ಮವು ಪ್ರಕಾಶವಾಯಿತು. ಹೇ ಭಗವಾನ್, ನಾನು ಇಂದಿನಿಂದ ಬುದ್ಧರಲ್ಲಿ ಶರಣು ಹೋಗುತ್ತೇನೆ, ಧಮ್ಮಕ್ಕೆ ಹಾಗೂ ಸಂಘಕ್ಕೂ ಸಹಾ ಶರಣು ಹೋಗುತ್ತೇನೆ. ಭಗವಾನರು ನನಗೆ ಪ್ರವಜ್ರ್ಯವನ್ನು ನೀಡುವಂತಾಗಲಿ, ಉಪಸಂಪದವು ದೊರೆಯುವಂತಾಗಲಿ.
ನಂತರ ಕೃಷಿಕ ಭಾರದ್ವಾಜನು ಭಗವಾನರಿಂದ ಪ್ರವಜ್ರ್ಯ ಪಡೆದನು, ಉಪಸಂಪದ ಪಡೆದನು. ಉಪಸಂಪದ ಪಡೆದ ಕೆಲವೇ ದಿನಗಳಲ್ಲಿ ಆಯುಷ್ಮಂತ ಭಾರದ್ವಾಜನು ಏಕಾಂತದಲ್ಲಿ ವಾಸಿಸಿ, ಸಂಯಮಿ, ಅಪ್ರಮಾದ ಧ್ಯಾನ ವಿಧಿಗಳಲ್ಲಿ ಮಗ್ನನಾದನು. ನಂತರ ಯಾವ ಪರಮ ಅರ್ಥವನ್ನು ಪಡೆಯಲು ಕುಲಪುತ್ರರು ಮನೆ ತ್ಯಜಿಸಿ ಪ್ರವಜರ್ಿತರಾಗಿ ಸಾಧನಶೀಲರಾಗುವರೋ, ಅಂತಹ ಅನುತ್ತರ ಬ್ರಹ್ಮಚರ್ಯದ ಅಂತಿಮ ಫಲವನ್ನು ಸ್ವಯಂ ಜ್ಞಾನವನ್ನು ಸಾಕ್ಷಾತ್ಕರಿಸಿದನು. ಹಾಗೆಯೇ ವಿಮುಕ್ತಿ ಜ್ಞಾನವು ಲಭಿಸಿತು- ಜನ್ಮವು ಕ್ಷೀಣವಾಯಿತು, ಬ್ರಹ್ಮಚರ್ಯವು ಪೂರ್ಣವಾಯಿತು, ಮಾಡಬೇಕಾದ್ದನ್ನು ಮಾಡಿಯಾಯಿತು, ಯಾವ ಶೇಷವೂ ಉಳಿದಿಲ್ಲ. ಆಯುಷ್ಮಂತ ಭಾರದ್ವಾಜನು ಅರಹಂತರಲ್ಲಿ ಒಬ್ಬನಾದನು.
ಇಲ್ಲಿಗೆ ಕಸಿ ಭಾರದ್ವಾಜ ಸುತ್ತ ಮುಗಿಯಿತು.

Friday, 15 August 2014

khagga visaana sutta in kannada

ಖಗ್ಗವಿಸಾಣ ಸುತ್ತ
(ಈ ಸುತ್ತದಲ್ಲಿ ಏಕಾಂಗಿಯಾಗಿ ಸಂಚರಿಸುವುದರ ಮಹತ್ವವನ್ನು ಹೇಳಲಾಗಿದೆ.)
1. ಸರ್ವ ಜೀವಿಗಳ ಹಿತಕ್ಕಾಗಿ ದಂಡಶಸ್ತ್ರಗಳನ್ನು ತ್ಯಜಿಸಿ, ಜೀವಿಗಳಲ್ಲಿ ಒಂದನ್ನು ಸಹಾ ಪೀಡಿಸದೆ ಪುತ್ರರ ಇಚ್ಛೆಯಿಲ್ಲದೆ, ನಿಷ್ಕಾಮನಾಗು, ಮತ್ತೆ ಸಂಗಾತಿಯ ಬಗ್ಗೆ ಏನು ಹೇಳುವುದು? ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸು.
2. ಸಂಸರ್ಗದಿಂದ ಇರುವವನಿಗೆ ಸ್ನೇಹ ಉತ್ಪನ್ನವಾಗುವುದು. ಸ್ನೇಹದ ಕಾರಣದಿಂದ ದುಃಖ ಉತ್ಪತ್ತಿಯಾಗುವುದು. ಆದ್ದರಿಂದ ಸ್ನೇಹದ ದುಷ್ಪರಿಣಾಮಗಳನ್ನು ಅರಿತು ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸು.
3. ಆಸಕ್ತಚಿತ್ತನಾದ ವ್ಯಕ್ತಿಯು ಮಿತ್ರರಲ್ಲಿ ಹಾಗು ಸೋದರ ಬಾಂಧವರಲ್ಲಿ ಅನುಕಂಪಪಡುತ್ತಾ, ತನ್ನ ಹಿತಾರ್ಥವನ್ನು ಕಳೆದುಕೊಳ್ಳುತ್ತಾನೆ. ಬೆರೆಯುವುದರಿಂದಾಗುವ ಈ ಅಪಾಯ ಅರಿತು ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸು.
4. ಸ್ತ್ರೀ ಪುತ್ರರ ಪ್ರತಿಯಾಗಿ ಯಾವ ಆಸಕ್ತಿ ಇರುತ್ತದೆಯೋ ಅದು ವಿಶಾಲವಾಗಿ ಹರಡಿರುವ ಬಿದಿರಿನಂತಿರುತ್ತದೆ. ಬಿದಿರಿನ ಬೊಂಬು ಯಾವುದಕ್ಕೂ ಅಂಟದಿರುವುದನ್ನು ಕಂಡು ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸು.
5. ಕಾಡಿನಲ್ಲಿ ಬಂಧನವಿಲ್ಲದಿರುವ ಮೃಗವು ಆಹಾರಕ್ಕಾಗಿ ಇಚ್ಛೆಬಂದಲ್ಲಿ ಹೋಗುತ್ತದೆ. ಆದ್ದರಿಂದ ಬುದ್ಧಿವಂತನು ಸ್ವತಂತ್ರತೆಯ ಲಾಭ ಅರಿತು ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸು.
6. ಎಲ್ಲಾದರೂ ನಿವಾಸಿಸಬೇಕಾದರೆ ಅಥವಾ ಒಂದುಕಡೆ ಇರಬೇಕಾದರೆ, ನಡೆದು ಹಾಗು ಯಾತ್ರೆ ಮಾಡುವುದರಿಂದ ಮಿತ್ರರೊಂದಿಗೆ ವಿಚಾರಣೆ ಮಾಡಬೇಕಾಗುತ್ತದೆ. ಆದ್ದರಿಂದ ವಿಚಾರಣೆಯ ಅನಾವಶ್ಯಕತೆ ಅರಿತು ಸ್ವತಂತ್ರವಾಗಿ ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸು.
7. ಸ್ನೇಹಿತರ ಮಧ್ಯೆ ಕ್ರೀಡೆ ಹಾಗು ಆನಂದಿಸುವಿಕೆ ಇರುತ್ತದೆ. ಸ್ತ್ರೀ ಪುತ್ರರೊಂದಿಗೆ ಅಧಿಕ ಪ್ರೇಮವಿರುತ್ತದೆ. ಆದರೆ ಪ್ರಿಯರ ವಿಯೋಗದ ಶೋಕ ಅರಿತು ಅದರಿಂದ ವಿರಾಗ ಹೊಂದಿ ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸು.
8. ಏನು ಸಿಕ್ಕರೂ ಅಷ್ಟರಲ್ಲೇ ಸಂತೃಪ್ತಿ ಹೊಂದುವವನು ನಾಲ್ಕು ದಿಕ್ಕುಗಳಲ್ಲೂ ನಿರ್ಭಯನಾಗಿರುತ್ತಾನೆ. ಸರ್ವ ವಿಘ್ನಗಳನ್ನು-ಕಷ್ಟಗಳನ್ನು ಸಹಿಸುವನು ಹಾಗು ಧೈರ್ಯವಂತನಾಗು. ಹೀಗೆಯೇ ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸು.
9. ಕೆಲವು ಪ್ರವಜರ್ಿತರು ಸಂತುಷ್ಠರಾಗಿರುವುದಿಲ್ಲ. ಕೆಲವು ಗೃಹಸ್ಥರು ಸಹಾ ಹೀಗಿರುತ್ತಾರೆ. ಇಬ್ಬರಲ್ಲಿಯೂ ಅನಾಸಕ್ತನಾಗಿ ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸು.
10. ಗೃಹಸ್ಥನ ವೇಷಭೂಷಣವನ್ನು ತೆಗೆದು, ಹೇಗೆ ಕೋವಿಲಾರದ ವೃಕ್ಷವು ಎಲೆರಹಿತವಾಗುವುದೋ ಹಾಗೆ ಗೃಹಸ್ಥ ಜೀವನದ ಬಂಧನಗಳನ್ನು ಮುರಿದು ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸು.
11. ಒಂದುವೇಳೆ ಸಹೃದಯ ಜ್ಞಾನಿಯಾದ ಮಿತ್ರನು ದೊರೆತರೆ ಸರ್ವ ವಿಘ್ನಗಳನ್ನು ಮೀರಿ ಅವನ ಜೊತೆ ಪ್ರಸನ್ನತೆಯಿಂದ, ಎಚ್ಚರಿಕೆಯಿಂದ ಜೀವಿಸು, ಸಂಚರಿಸು.
12. ಒಂದುವೇಳೆ ಸಂಚರಿಸುವಂತಹ ಸಹೃದಯಿ ಜ್ಞಾನಿ ಮಿತ್ರನು ದೊರೆಯದಿದ್ದರೆ ರಾಜನು ಪರಾಜಿತ ರಾಜ್ಯವನ್ನು ತ್ಯಜಿಸುವಂತೆ, ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸು.
13. ನಾವು ನಿದರ್ಿಷ್ಟವಾದ ರೀತಿಯಲ್ಲಿ ಬಹಳ ಮಿತ್ರರನ್ನು ಹೊಂದಿರುವುದಕ್ಕೆ ಪ್ರಶಂಶಿಸುತ್ತೇವೆ. ಆದರೆ ತನಗಿಂತ ಶ್ರೇಷ್ಠ ಅಥವಾ ಸಮಾನರೊಡನೆ ಮಿತ್ರತ್ವ ಮಾಡಬೇಕು. ಆ ರೀತಿ ದೊರೆಯದಿದ್ದರೆ ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸಲಿ.
14. ಅಕ್ಕಸಾಲಿಗನಿಂದ ನಿಮರ್ಿತವಾದ ಹೊಳೆಯುವ ಆಭೂಷಣಗಳು ಎರಡು ಕೈಗಳಲ್ಲಿ ಒಂದಕ್ಕೊಂದು ತಾಗಿ ಶಬ್ದ ಮಾಡುವುದನ್ನು ಕಂಡು ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸು.
15. ಈ ರೀತಿಯಾಗಿ ಇನ್ನೊಬ್ಬರಲ್ಲಿ ಮಾತುಕತೆ ಅಥವಾ ಆಸಕ್ತಿ ಉಂಟಾಗುವುದನ್ನು ಕಂಡು, ಭವಿಷ್ಯದ ಅಪಾಯ ಅರಿತು ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸು.
16. ಸಂಸಾರದ ಕಾಮಭೋಗಗಳು ವಿಚಿತ್ರ, ಮಧುರ ಹಾಗು ಮನೋಹರವಾಗಿದೆ. ಅವು ನಾನಾರೀತಿಯಿಂದ ಚಿತ್ತವನ್ನು ಚಂಚಲಗೊಳಿಸುತ್ತದೆ. ಕಾಮಭೋಗದ ಅಪಾಯವನ್ನು ಅರಿತು ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸು.
17. ಇದು ಮಹಾವಿಪತ್ತಿದಾಯಕ, ಹುಣ್ಣು, ಉಪದ್ರವ, ರೋಗ, ಮುಳ್ಳು ಹಾಗು ಅಪಾಯಕಾರಿ. ಕಾಮಬೋಗದಲ್ಲಿರುವ ಇಂತಹ ಅಪಾಯವನ್ನು ಕಂಡು ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸು.
18. ಶೀತ ಹಾಗು ಉಷ್ಣ, ಹಸಿವು ಬಾಯಾರಿಕೆ, ಚಳಿ-ಬಿಸಿಲು, ಸೊಳ್ಳೆ ಹಾಗು ಸರ್ಪ ಇವೆಲ್ಲವನ್ನು ಸಹಿಸುತ್ತಾ ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸು.
19. ಹೇಗೆ ಪದ್ಮಕುಲದಲ್ಲಿ ಜನಿಸಿದ ಗಜರಾಜನು ತನ್ನ ದಳವನ್ನು ತ್ಯಜಿಸಿ ಇಚ್ಛೆಯಾನುಸಾರವಾಗಿ ಅರಣ್ಯದಲ್ಲಿ ವಿಹರಿಸುವನೋ ಅದೇರೀತಿಯಾಗಿ ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸು.
20. ಭಗವಾನ ಬುದ್ಧರ ಸತ್ಯವಾಣಿ ಆಲಿಸು ಗುಂಪಿನಲ್ಲಿರುವವನಿಗೆ ಪೂರ್ಣ ವಿಮುಕ್ತಿ ಅಸಂಭವ ಇದನ್ನು ಅರಿತು ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸು.
21. ನಾನು ಮಿಥ್ಯಾದೃಷ್ಟಿಗಳನ್ನು ಮೀರಿಹೋಗಿದ್ದೇನೆ. ನಾನು ಗುರಿಯನ್ನು ಪ್ರಾಪ್ತಿ ಮಾಡಿದ್ದೇನೆ, ಮಾರ್ಗವನ್ನು ಕ್ರಮಿಸಿದ್ದೇನೆ. ಜ್ಞಾನೋದಯವಾಗಿದೆ. ನನಗೆ ಪರರ ಸಹಾಯತೆ ಅನಾವಶ್ಯಕ. ಆದ್ದರಿಂದ ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸು.
22. ಲೋಭ, ಮೋಸ, ತೃಷ್ಣ, ಬಾಯಾರಿಕೆ, ಚಿತ್ತಮಲಿನತೆ ಹಾಗು ಮೋಹದಿಂದ ರಹಿತನಾಗು. ಯಾವುದೇ ಪ್ರಕಾರದ ಇಚ್ಛೆ ಮಾಡದೆ ಸಂಸಾರದ ಸರ್ವ ಆಸಕ್ತಿಯನ್ನು ತ್ಯಜಿಸಿ ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸು.
23. ಅನರ್ಥವನ್ನು ಬಯಸುವುದು, ಕೆಟ್ಟ ಕಾರ್ಯಗಳಲ್ಲಿ ಮಗ್ನವಾಗುವುದು, ಕೆಟ್ಟ ಮಿತ್ರರೊಂದಿಗೆ ಕೂಡಿರುವುದು ಇವೆಲ್ಲವನ್ನು ತ್ಯಜಿಸಿ ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸಿ.
24. ಬಹುಶೃತ, ಧರ್ಮದರ, ಉದಾರಿ ಹಾಗು ಪ್ರತಿಭಾವಂತ ಮಿತ್ರನ ಜೊತೆ ಸೇರು. ಅರ್ಥವನ್ನು ಅರಿತುಕೋ, ಸಂದೇಹವನ್ನು ದೂರೀಕರಿಸಿ, ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸು.
25. ಕ್ರೀಡೆ, ರತಿ ಹಾಗು ಸಾಂಸಾರಿಕ ಕಾಮಸುಖಗಳನ್ನು ಇಚ್ಛಿಸದೆ, ಅದರ ಪ್ರತಿ ಅನಾಸಕ್ತನಾಗಿ ಶೃಂಗಾರ ವಸ್ತುಗಳಿಂದ ವಿರತನಾಗಿ ಸತ್ಯಸಂಧನಾಗು, ನಂತರ ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸು.
26. ಪುತ್ರ, ಸ್ತ್ರೀ, ಪಿತ, ಮಾತ, ಧನ, ಧಾನ್ಯ ಹಾಗು ಬಂಧುಗಳ ಜೊತೆಗೆ ಸರ್ವ ಕಾಮಭೋಗವನ್ನು ವಜರ್ಿಸಿ ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸು.
27. ಇದು ಬಂಧನಕಾರಿ, ಇದರಲ್ಲಿ ಅಲ್ಪಸುಖವಿದೆ. ಇದರಲ್ಲಿ ಅತ್ಯಲ್ಪ ಸ್ವಾದವಿದೆ ಹಾಗು ದುಃಖ ಅಪಾರವಿದೆ. ಬುದ್ಧಿವಂತ ಪುರುಷ ಇದು ಹುಣ್ಣು ಎಂದು ಅರಿತು ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸುತ್ತಾನೆ.
28. ಯಾವರೀತಿ ಮೀನು ಜಾಲವನ್ನು ಛೇದಿಸಿ ಹೊರಬರುವುದೋ, ಅದೇರೀತಿ ಬಂಧನಗಳನ್ನು ನಷ್ಟಮಾಡಿ, ನಿಲ್ಲದ ಅಭಂಗ ಅಗ್ನಿಯಾಗಿ ಸರ್ವ ಬಂಧನಗಳನ್ನು ಸುಟ್ಟು (ಕತ್ತರಿಸಿ) ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸು.
29. ನಯನಗಳನ್ನು ಕೆಳಗೆ ನೆಟ್ಟು, ವೇಗವಾಗಿ ನಡಿಯದ, ಇಂದ್ರಿಯಗಳನ್ನು ಸಂಯಮಗೊಳಿಸಿದ ಮನವನ್ನು ವಶಗೊಳಿಸಿರುವ, ತೀವ್ರ ಬಯಕೆ ಹಾಗು ಕಾಮ ವಾಸನೆಯಿಂದ ದೂರಾಗಿ ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸು.
30. ಎಲೆರಹಿತ ಪಾರಿಜಾತ ವೃಕ್ಷದ ರೀತಿ ಗೃಹಸ್ಥ ವೇಷಭೂಷಣವನ್ನು ವಜರ್ಿಸಿ, ಕಾಷಾಯ ವಸ್ತ್ರಧಾರಿಯಾಗು, ಗೃಹ ತ್ಯಜಿಸಿ ಖಡ್ಗಮೃಗದಂತೆ ಏಕಾಂಗಿಯಾಗಿ ಸಂಚರಿಸು.
31. ನಾಲಿಗೆಯಲ್ಲಿ ರಸತೃಷ್ಣೆಯಿಲ್ಲದೆ, ಲೋಭರಹಿತನಾಗಿ, ಚಂಚಲತೆಯಿಲ್ಲದೆ, ಪರರನ್ನು ಪೋಷಿಸದಿರುವ, ಮನೆ ಮನೆಗಳಲ್ಲಿ ಭಿಕ್ಷಾಟನೆ ಮಾಡುವವ, ಯಾವ ಕುಲದಲ್ಲಿಯೂ ಆಸಕ್ತಿ ತಾಳದ ಅವನು, ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸಲಿ.
32. ಚಿತ್ತದ ಐದು ತಡೆಗಳನ್ನು ತ್ಯಜಿಸಿ ಚಿತ್ತದಿಂದ ಉಪಕ್ಲೇಶಗಳು ದೂರವಾಗಿ ಅನಾಸಕ್ತನಾಗಲಿ, ಸ್ನೇಹವನ್ನು (ಅಂಟುವಿಕೆ) ಬಿಟ್ಟು ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸಲಿ.
33. ಸುಖ ಹಾಗು ದುಃಖಗಳನ್ನು ತ್ಯಾಗಮಾಡಿ, ಮೊದಲೇ ಸೋಮನಸ್ಸು ಹಾಗು ದೋಮನಸ್ಸುಗಳನ್ನು ದೂರಮಾಡಿ, ವಿಶುದ್ಧವಾದ ಸಮಚಿತ್ತತೆಯ (ಶಾಂತಿ) ಶ್ರೇಷ್ಠ ಸಮಾಧಿಯನ್ನು ಪ್ರಾಪ್ತಿಮಾಡಿ ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸು.
34. ಪರಮಾರ್ಥದ ಪ್ರಾಪ್ತಿಗಾಗಿ ಸತತ ಪ್ರಯತ್ನಶೀಲನಾಗು, ಜಾಗರೂಕನಾಗು, ಆಲಸ್ಯವನ್ನು ತ್ಯಜಿಸು, ದೃಢಸಂಕಲ್ಪ ತಾಳು, ಸ್ಥೈರ್ಯ ಹಾಗು ಬಲದಿಂದ ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸು.
35. ಸಮಾಧಿಸ್ಥನಾಗು, ಧ್ಯಾನದಲ್ಲಿ ತಲ್ಲೀನನಾಗು, ನಿತ್ಯವು ಧರ್ಮಕ್ಕೆ ಅನುಸಾರವಾಗಿ ನಡೆ, ಸಂಸಾರದ ದುಷ್ಪರಿಣಾಮಗಳನ್ನು ಮನನ ಮಾಡುತ್ತಾ ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸು.
36. ತೀವ್ರ ಬಯಕೆಯನ್ನು ಕ್ಷಯಿಸು, ಎಚ್ಚರಿಕೆಯಿಂದಿರು, ಧ್ಯಾನ ನೈಪುಣ್ಯನಾಗು, ಶೃತವಂತನಾಗು ಹಾಗು ಜಾಗರೂಕನಾಗಿ ಧರ್ಮವನ್ನು ಅರಿತುಕೋ, ತಪಸ್ಸಿನಲ್ಲಿ ನಿರತನಾಗು, ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸು.
37. ಶಬ್ದಕ್ಕೆ ಹೆದರದ ಸಿಂಹದ ಸಮಾನನಾಗು, ವಾಯುವಿನಂತೆ ಬಲೆಯಲ್ಲಿ ಬೀಳದಿರುವನಾಗು, ಜಲದಿಂದ ಲಿಪ್ತವಾಗದ ಕಮಲದ ಸಮಾನನಾಗು, ಖಡ್ಗಮೃಗದಂತೆ ಏಕಾಂಗಿಯಾಗಿ ಸಂಚರಿಸು.
38. ಹೇಗೆ ಸಶಕ್ತ ಮೃಗರಾಜ ಸಿಂಹ ಸರ್ವ ಪ್ರಾಣಿಗಳನ್ನು ದಮನಮಾಡಿ ಇರುತ್ತದೋ, ಹಾಗೆಯೇ ಏಕಾಂತದ ಶಯನಾಸನವನ್ನು ಸೇವಿಸಲಿ ಹಾಗು ಖಡ್ಗಮೃಗದಂತೆ ಏಕಾಂಗಿಯಾಗಿ ಸಂಚರಿಸಲಿ.
39. ಸಮಯಕ್ಕೆ ಅನುಸಾರವಾಗಿ ಮೈತ್ರಿ, ಕರುಣಾ, ಮುದಿತಾ, ಉಪೇಕ್ಷಾ ಹಾಗು ವಿಮುಕ್ತಿಯ ಧ್ಯಾನ ಅಭ್ಯಾಸವನ್ನು ಮಾಡು, ಸರ್ವ ಸಂಸಾರದ ಮೇಲೆ ವಿರೋಧಭಾವ ತಾಳದೆ, ಖಡ್ಗಮೃಗದಂತೆ ಏಕಾಂಗಿಯಾಗಿ ಸಂಚರಿಸು.
40. ರಾಗ, ದ್ವೇಷ ಹಾಗು ಮೋಹವನ್ನು ತ್ಯಾಗಮಾಡು, ಬಂಧನಗಳನ್ನು ನಷ್ಟಮಾಡು, ಮೃತ್ಯುವಿಗೂ ಹೆದರದೆ, ಖಡ್ಗಮೃಗದಂತೆ ಏಕಾಂಗಿಯಾಗಿ ಸಂಚರಿಸು.
41. ಜನರು ಸ್ವಾರ್ಥಕ್ಕಾಗಿ ಸ್ನೇಹ ಮಾಡುವರು (ಸಂಗಡ ಇರುವರು), ನಿಸ್ವಾರ್ಥ ಮಿತ್ರರು ದುರ್ಲಭ, ಬಹುಪಾಲು ಮಾನವರು ಸ್ವಾರ್ಥ ಹಾಗು ಕೆಟ್ಟ ಸ್ವಭಾವದವರಾಗಿದ್ದಾರೆ. ಆದ್ದರಿಂದ ಖಡ್ಗಮೃಗದ ರೀತಿ ಏಕಾಂಗಿಯಾಗಿ ಸಂಚರಿಸು.
ಇಲ್ಲಿಗೆ ಖಗ್ಗವಿಸಾಣ ಸುತ್ತ ಮುಗಿಯಿತು.

dhaniya sutta in kannada

. ಧನಿಯ ಸುತ್ತ
(ಈ ಸುತ್ತವನ್ನು ಭಗವಾನರು ವಿದೇಹ ರಾಷ್ಟ್ರದಲ್ಲಿರುವ ಪರ್ವತರಾಷ್ಟ್ರದ ಧರ್ಮಕೌಂಡಿನ್ಯ ನಗರದ ಶ್ರೇಷ್ಠಿ ಧನಿಯನಿಗೆ ಮಹಾನದಿಯ ದಡದಲ್ಲಿ ವರ್ಷಕಾಲದಲ್ಲಿ ಸಾಂಸಾರಿಕ ಆಸಕ್ತಿ ತ್ಯಜಿಸಲು ಉಪದೇಶಿಸಿದರು. ಅದನ್ನು ಆಲಿಸಿ ಧನಿಯ ತನ್ನ ಪತ್ನಿಸಹಿತ ಭಿಕ್ಷುವಾದನು ಹಾಗು ಅರಹತ್ವವನ್ನು ಸಾಕ್ಷಾತ್ಕರಿಸಿದನು. ಸಂಪೂರ್ಣ ಸುತ್ತವು ಈಗ ನಡೆದಂತಿದೆ.)
1. ಧನಿಯ ಗೊಲ್ಲ - ಅನ್ನವು ಸಿದ್ಧವಾಗಿದೆ, ನಾವು ಹಾಲನ್ನು ಸೇರಿಸಿದ್ದೇವೆ, ನಮ್ಮ ಪರಿಜನರ ಸಹಿತ ನಾನು ಮಹಾನದಿಯ ದಡದಲ್ಲಿ ವಾಸಿಸುತ್ತೇನೆ. ಮನೆಯು ಸಹಾ ಚೆನ್ನಾಗಿ ಶೋಭಿಸುತ್ತಿದೆ, ಬೆಂಕಿಯು ಉರಿಯುತ್ತಿದೆ. ಹೇ ವರುಣದೇವ, ನೀವು ಇಚ್ಛಿಸಿದರೆ ಸುರಿಸಿ.
2. ಭಗವಾನ್ ಬುದ್ಧ - ನಾನು ಕ್ರೋಧರಹಿತನಾಗಿದ್ದೇನೆ, ನನ್ನ ಚಿತ್ತದ ಮುಳ್ಳುಗಳು ತೆಗೆಯಲ್ಪಟ್ಟಿವೆ. ಈ ಮಹಾನದಿಯ ಹತ್ತಿರ ಒಂದು ರಾತ್ರಿ ವಾಸಿಸುತ್ತೇನೆ. ನನ್ನ ಕುಟೀರವು ತೆರೆದಿದೆ (ರಾಗ, ದ್ವೇಷ ಮೋಹದಿಂದ ಕೂಡಿದ), ಅಗ್ನಿಗಳು ಶಾಂತವಾಗಿದೆ. ಹೇ ವರುಣದೇವ, ನೀನು ಇಚ್ಛಿಸಿದರೆ ಸುರಿಸು.
3. ಧನಿಯ ಗೊಲ್ಲ - ಇಲ್ಲಿ ಸೊಳ್ಳೆಗಳಿಲ್ಲ, ನೆಲದಲ್ಲಿ ಸಿಗುವ ಹುಲ್ಲನ್ನು ಹಸುಗಳು ಮೇಯುತ್ತವೆ. ಬರುವ ಮಳೆಯನ್ನು ಸಹಿಸಿಕೊಳ್ಳತ್ತವೆ. ಹೇ ದೇವ, ನೀವು ಇಚ್ಛಿಸಿದರೆ ಸುರಿಸಿ.
4. ಭಗವಾನರು - ನಾನು ಒಂದು ಉತ್ಕೃಷ್ಟವಾದ ತೆಪ್ಪವನ್ನು ಸಿದ್ಧಪಡಿಸಿದ್ದೇನೆ, ಸಂಸಾರದ ಪ್ರವಾಹವನ್ನು ಈಜಿ ಪಾರಾಗಿದ್ದೇನೆ. ನನಗೀಗ ತೆಪ್ಪದ ಅವಶ್ಯಕತೆಯಿಲ್ಲ, ಹೇ ವರುಣದೇವ! ನೀನು ಇಚ್ಛಿಸಿದರೆ ಸುರಿಸು.
5. ದನಿಯ ಗೊಲ್ಲ - ನನ್ನ ಗೋಪಿಕೆಯು ಆಜ್ಞಾಕಾರಿಣಿ ಹಾಗು ಚಂಚಲರಹಿತಳಾಗಿದ್ದಾಳೆ. ಆಕೆಯು ದೀರ್ಘಕಾಲದಿಂದ ಪ್ರೇಮಯುತವಾಗಿ ಹೊಂದಿಕೊಂಡು ಬಾಳಿದ್ದಾಳೆ. ನಾನು ಆಕೆಯಲ್ಲಿ ಯಾವರೀತಿಯ ಪಾಪವನ್ನು ಕೇಳಿಲ್ಲ. ಹೇ ವರುಣದೇವ ನೀವು ಇಚ್ಛಿಸಿದರೆ ಸುರಿಸಿ.
6. ಭಗವಾನರು - ನನ್ನ ಚಿತ್ತವು ಪೂರ್ಣವಾಗಿ ನನ್ನ ವಶದಲ್ಲಿದೆ ಹಾಗು ವಿಮುಕ್ತವಾಗಿದೆ. ಅದು ದೀರ್ಘ ಕಾಲದಿಂದ ಸುರಕ್ಷಿತವಾಗಿ ಹಾಗು ದಮನಯುತವಾಗಿದೆ, ನನ್ನ ಆಂತರ್ಯದಲ್ಲಿ ಪಾಪವಿಲ್ಲ. ಹೇ ವರುಣದೇವ! ನೀನು ಇಚ್ಛಿಸಿದರೆ ಸುರಿಸು.
7. ದನಿಯ ಗೊಲ್ಲ - ನಾನು ಸ್ವಯಂ ದುಡಿದು ತಿನ್ನುತ್ತೇನೆ, ನನ್ನ ಪುತ್ರರು ಸಹಾ ಅನುಕೂಲಕರವಾಗಿದ್ದಾರೆ ಹಾಗು ನಿರೋಗಿಗಳಾಗಿದ್ದಾರೆ, ನಾನು ಅವರಲ್ಲಿ ಯಾವುದೇ ದೋಷ ಕೇಳಿಲ್ಲ. ಹೇ ವರುಣದೇವ ! ನೀವು ಇಚ್ಛಿಸಿದರೆ ಸುರಿಸಿ.
8. ಭಗವಾನರು - ನಾನು ಯಾರ ದಾಸನೂ ಅಲ್ಲ, ನನಗೆ ಯಾವುದೇ ವ್ಯಕ್ತಿಯ ಅವಶ್ಯಕತೆಯೂ ಇಲ್ಲ, ಹೇ ವರುಣದೇವ, ನೀನು ಇಚ್ಛಿಸಿದರೆ ಸುರಿಸು.
9. ಧನಿಯ ಗೊಲ್ಲ - ನನ್ನ ಹತ್ತಿರ ಕರುಗಳಿವೆ, ಹಾಲುಳ್ಳ ಹಸುಗಳಿವೆ, ಗಭರ್ಿಣಿ ಹಾಗು ತಾರುಣ್ಯವುಳ್ಳ ಹಸುಗಳಿವೆ, ಹಸುಗಳ ಪತಿ ವೃಷಭನು ಇದ್ದಾನೆ. ಹೇ ವರುಣದೇವ. ನೀವು ಇಚ್ಛಿಸಿದರೆ ಸುರಿಸಿ.
10. ಭಗವಾನರು - ನನ್ನ ಹತ್ತಿರ ಕರುಗಳಿಲ್ಲ, ಅತಿ ಹಾಲುಳ್ಳ ಹಸುಗಳೂ ಇಲ್ಲ, ತಾರುಣ್ಯ ಹಾಗು ಗರ್ಭವತಿಯಾದ ಹಸುಗಳೂ ಇಲ್ಲ, ಹಸುಗಳ ಪತಿ ವೃಷಭನೂ ಇಲ್ಲ. ಹೇ ವರುಣದೇವ! ನೀನು ಇಚ್ಛಿಸಿದರೆ ಸುರಿಸು.
11. ದನಿಯ ಗೊಲ್ಲ - ಅಚಲವಾದ ಹುಲ್ಲಿನ ಮೈದಾನವಿದೆ, ಮುಂಜಾಹುಲ್ಲಿನ ಹಗ್ಗಗಳಿವೆ, ಅದನ್ನು ತರುಣ ಕರುಗಳು ಸಹಾ ಮುರಿಯಲಾರವು. ಹೇ ವರುಣದೇವಾ, ನೀವು ಇಚ್ಛಿಸಿದರೆ ಸುರಿಸಿ.
12. ಭಗವಾನರು - ಮಹಾಗೂಳಿಯ ರೀತಿ ಬಂಧನಗಳನ್ನು ಕತ್ತರಿಸಿ, ಸಲಗದ ರೀತಿ ಪೂತಿಲತೆಯನ್ನು ನಷ್ಟಮಾಡಿ, ನಾನು ಮತ್ತೆ ಜನ್ಮ ಪಡೆಯಲಾರೆ. ಹೇ ವರುಣದೇವ ನೀನು ಇಚ್ಛಿಸಿದರೆ ಸುರಿಸು.
13. ಅದೇ ಕ್ಷಣದಲ್ಲಿ ಹಳ್ಳ-ಕೊಳ್ಳದ ಭೂಮಿಯನ್ನು ತುಂಬುವ ಹಾದಿಯಲ್ಲಿ ಮಳೆಯು ಸುರಿಯಿತು. ಸುರಿಯುತ್ತಿರುವ ಮಳೆ ಹಾಗು ಮೇಘ ಘರ್ಜನೆಯನ್ನು ಕೇಳಿ ಧನಿಯನು ಈ ಮಾತನ್ನು ಹೇಳಿದನು-
14. ಅಹೋ ನಮಗೆ ಬಹಳ ಲಾಭವಾಯಿತು. ಏಕೆಂದರೆ ನಾವು ಭಗವಾನರನ್ನು ದಶರ್ಿಸುತ್ತಿದ್ದೇವೆ. ನಾವು ಚಕ್ಷುವಂತರ ಶರಣು ಹೋಗುತ್ತೇವೆ. ಹೇ ಮಹಾಮುನಿ! ತಾವು ನಮ್ಮ ಶಾಸ್ತರಾಗಿದ್ದೀರಿ.
15. ನಾನು ಹಾಗು ನನ್ನ ಅಜ್ಜಾಕಾರಿಣಿ ಗೋಪಿಕೆ ಬುದ್ಧರ ಧಮ್ಮವನ್ನು ಪಾಲಿಸುತ್ತೇವೆ ಹಾಗು ಜನನ ಹಾಗು ಮೃತ್ಯುವನ್ನು ದಾಟಿ ದುಃಖವನ್ನು ಅಂತ್ಯಮಾಡುವವರಾಗುತ್ತೇವೆ.
16. ಮಾರ - ಪುತ್ರರಿಂದ ಕೂಡಿರುವವನು ಪುತ್ರರಿಂದ ಆನಂದಿತನಾಗುತ್ತಾನೆ, ಅದರಂತೆಯೇ ಗೊಲ್ಲನು ಹಸುಗಳಿಂದ ಆನಂದಿತನಾಗುತ್ತಾನೆ. ವಿಷಯ ಭೋಗವೇ ಮನುಷ್ಯನ ಆನಂದದ ಕಾರಣವಾಗಿದೆ, ಯಾರು ವಿಷಯ ಭೋಗರಹಿತರೋ ಅವರು ಎಂದಿಗೂ ಆನಂದಿತರಲ್ಲ.
17. ಭಗವಾನರು - ಪುತ್ರರನ್ನು ಹೊಂದಿರುವವನು ಪುತ್ರರಿಂದ ಶೋಕಿಸುತ್ತಾನೆ. ಅದರಂತೆಯೇ ಗೊಲ್ಲನು ಗೋವುಗಳಿಂದ ಶೋಕಿಸುತ್ತಾನೆ. ವಿಷಯ ಭೋಗವೇ ಶೋಕದ ಕಾರಣವಾಗಿದೆ. ಯಾರು ವಿಷಯ ಭೋಗದಿಂದ ಮುಕ್ತನೋ ಅವನು ಎಂದಿಗೂ ಶೋಕಿಸುವುದಿಲ್ಲ.
ಇಲ್ಲಿಗೆ ಧನಿಯ ಸುತ್ತ ಮುಗಿಯಿತು

uraga vagga in kannada

ಖುದ್ದಕನಿಕಾಯ
ಸುತ್ತ ನಿಪಾತ
. ಉರಗ ವಗ್ಗ
1. ಉರಗ ಸುತ್ತ (ಸರ್ಪ ಸುತ್ತ)
(ಈ ಸುತ್ತದಲ್ಲಿ ನಿಬ್ಬಾಣ ಪ್ರಾಪ್ತಿಗಾಗಿ ಶ್ರಮಿಸುವ ಭಿಕ್ಷುಗಳಿಗೆ ಇರುವಂತಹ ಗುಣಗಳನ್ನು ವಣರ್ಿಸಲಾಗಿದೆ. ಇದರಲ್ಲಿ ಸರ್ಪವು ಪೊರೆಯನ್ನು ತ್ಯಜಿಸುವ ರೀತಿಯಲ್ಲಿ ಈ ಲೋಕ ಮತ್ತು ಪರಲೋಕವನ್ನು ತ್ಯಾಗ ಮಾಡುವುದನ್ನು ಹೇಳಲಾಗಿದೆ.)
1. ಯಾವ ರೀತಿಯಲ್ಲಿ ಶರೀರದಲ್ಲಿರುವ ಸರ್ಪದ ವಿಷವನ್ನು ಔಷಧಿಯಿಂದ ಶಾಂತ ಮಾಡಬಹುದೋ ಅದೇ ಪ್ರಕಾರದಲ್ಲಿ ಭಿಕ್ಷುವು ಉತ್ಪನ್ನವಾಗಿರುವ ಕ್ರೋಧವನ್ನು ಶಾಂತಗೊಳಿಸುತ್ತಾನೆ. ಸರ್ಪವು ಪೊರೆಯು ತ್ಯಜಿಸುವಂತೆ ಆತನು ಈ ಲೋಕ ಹಾಗು ಪರಲೋಕದ ಬಗೆಗಿನ ಆಸಕ್ತಿಯನ್ನೆಲ್ಲಾ ತ್ಯಜಿಸುತ್ತಾನೆ.
2. ಯಾವ ರೀತಿಯಲ್ಲಿ ಕೆರೆಯಲ್ಲಿ ಪ್ರವೇಶಿಸಿ ಕಮಲವನ್ನು ಕೀಳುವರೋ, ಅದೇರೀತಿಯಲ್ಲಿ ಭಿಕ್ಷುವು ಸಂಪೂರ್ಣ ರಾಗವನ್ನು ನಷ್ಟಗೊಳಿಸುತ್ತಾನೆ. ಆತನು ಸರ್ಪವು ಪೊರೆಯನ್ನು ತ್ಯಜಿಸುವಂತೆ ಇಹಪರಗಳನ್ನು ತ್ಯಜಿಸುತ್ತಾನೆ.
3. ಯಾವ ರೀತಿಯಲ್ಲಿ ಮಹಾತೇಜವು ಹರಿಯುವ ನದಿಯನ್ನು ಸಹಾ ಒಣಗಿಸಿಬಿಡುತ್ತದೋ, ಅದೇ ರೀತಿಯಲ್ಲಿ ಭಿಕ್ಷುವು ತನ್ನಲ್ಲಿನ ಅಭಿಮಾನವನ್ನು ತೆಗೆದು ಬಿಸಾಡಿರುವನು. ಆತನು ಸರ್ಪವು ಪೊರೆಯನ್ನು ತ್ಯಜಿಸುವಂತೆ ಇಹಪರಗಳನ್ನು ತ್ಯಜಿಸುತ್ತಾನೆ.
4. ಯಾವ ರೀತಿಯಲ್ಲಿ ಅತಿ ದುರ್ಬಲವಾದ ನರಕಟ ಪುಷ್ಪವನ್ನು ಬೃಹತ್ ಪ್ರವಾಹವು ಎತ್ತಿಕೊಂಡು ಹೋಗುತ್ತದೋ ಅದೇರೀತಿಯಲ್ಲಿ ಭಿಕ್ಷುವು ತನ್ನ ಅಹಂಕಾರವನ್ನು ತಗೆದು ಬಿಸಾಡುವನು. ಆತನು ಸರ್ಪವು ಪೊರೆಯನ್ನು ತ್ಯಜಿಸುವಂತೆ ಇಹಪರಗಳನ್ನು ತ್ಯಜಿಸುತ್ತಾನೆ.
5. ಯಾವ ರೀತಿಯಲ್ಲಿ ಅತ್ತಿ (ಆಲದ) ವೃಕ್ಷದಲ್ಲಿ ಪುಷ್ಪವನ್ನು ಎಷ್ಟು ಹುಡುಕಿದರೂ ಸಿಗುವುದಿಲ್ಲವೋ ಅದೇರೀತಿ ಭಿಕ್ಷುವು ಸಂಸಾರದಲ್ಲಿ ಯಾವ ರೀತಿಯ ಸಾರವನ್ನು ಕಾಣುವುದಿಲ್ಲ. ಆತನು ಸರ್ಪವು ಪೊರೆಯನ್ನು ತ್ಯಜಿಸುವಂತೆ ಇಹಪರಗಳನ್ನು ತ್ಯಜಿಸುತ್ತಾನೆ.
6. ಯಾವ ಭಿಕ್ಷುವಿನ ಆಂತರ್ಯದಲ್ಲಿ ಕೋಪವಿಲ್ಲವೊ ಹಾಗು ಪಾಪ-ಪುಣ್ಯಗಳನ್ನು ಮೀರಿ ಹೋಗಿರುವನೋ ಆತನು ಸರ್ಪವು ಪೊರೆಯನ್ನು ತ್ಯಜಿಸುವಂತೆ ಇಹಪರಗಳನ್ನು ತ್ಯಜಿಸುತ್ತಾನೆ.
7. ಯಾವ ಭಿಕ್ಷುವಿನಲ್ಲಿ ವಿತರ್ಕವು ನಷ್ಟವಾಗಿದೆಯೋ ಹಾಗು ಆತನ ಚಿತ್ತವು ಪೂರ್ಣವಾಗಿ ಆತನ ಅಧೀನದಲ್ಲಿದೆಯೋ ಆತನು ಸರ್ಪವು ಪೊರೆಯನ್ನು ತ್ಯಜಿಸುವಂತೆ ಇಹಪರಗಳನ್ನು ತ್ಯಜಿಸುತ್ತಾನೆ.
8. ಯಾವ ಭಿಕ್ಷುವು ಅತಿ ಶೀಘ್ರಗಾಮಿಯಲ್ಲವೋ ಅಥವಾ ಅತಿ ಮಂದಗಾಮಿಯಲ್ಲವೋ ಹಾಗು ಅವನು ಇಡೀ ಪ್ರಾಪಂಚಿಕತೆಯನ್ನು ದಾಟಿ ಹೋಗಿರುವನೋ ಆತನು ಸರ್ಪವು ಪೊರೆಯನ್ನು ತ್ಯಜಿಸುವಂತೆ ಇಹಪರಗಳನ್ನು ತ್ಯಜಿಸುತ್ತಾನೆ.
9. ಯಾವ ಭಿಕ್ಷುವು ಅತಿ ಶೀಘ್ರಗಾಮಿಯಲ್ಲವೋ ಅಥವಾ ಅತಿ ಮಂದಗಾಮಿಯಲ್ಲವೋ ಹಾಗು ಆತನು ಲೋಕದ ಪ್ರತಿಯೊಂದು ನಿಸ್ಸಾರ ಎಂದು ಸ್ಪಷ್ಟವಾಗಿ ಅರಿತಿರುವನೋ ಆತನು ಸರ್ಪವು ಪೊರೆಯನ್ನು ತ್ಯಜಿಸುವಂತೆ ಇಹಪರಗಳನ್ನು ತ್ಯಜಿಸುತ್ತಾನೆ.
10. ಯಾವ ಭಿಕ್ಷುವು ಅತಿ ಶೀಘ್ರಗಾಮಿಯಲ್ಲವೋ ಅಥವಾ ಅತಿ ಮಂದಗಾಮಿಯಲ್ಲವೋ ಹಾಗು ಆತನು ಇವೆಲ್ಲವೂ ಸಂಪೂರ್ಣವಾಗಿ ನಿಸ್ಸಾರ ಎಂದು ಸ್ಪಷ್ಟವಾಗಿ ಅರಿತಿರುವನೋ ಆತನು ಸರ್ಪವು ಪೊರೆಯನ್ನು ತ್ಯಜಿಸುವಂತೆ ಇಹಪರಗಳನ್ನು ತ್ಯಜಿಸುತ್ತಾನೆ.
11. ಯಾವ ಭಿಕ್ಷುವು ಅತಿ ಶೀಘ್ರಗಾಮಿಯಲ್ಲವೋ ಅಥವಾ ಅತಿ ಮಂದಗಾಮಿಯಲ್ಲವೋ ಹಾಗು ಇದು ಸಂಪೂರ್ಣ ನಿಸ್ಸಾರವೆಂದು ಅರಿತು ರಾಗರಹಿತನಾಗಿರುವನೋ ಆತನು ಸರ್ಪವು ಪೊರೆಯನ್ನು ತ್ಯಜಿಸುವಂತೆ ಇಹಪರಗಳನ್ನು ತ್ಯಜಿಸುತ್ತಾನೆ.
12. ಯಾವ ಭಿಕ್ಷುವು ಅತಿ ಶೀಘ್ರಗಾಮಿಯಲ್ಲವೋ ಅಥವಾ ಅತಿ ಮಂದಗಾಮಿಯಲ್ಲವೋ ಹಾಗು ಇದೆಲ್ಲವೂ ಸಂಪೂರ್ಣ ನಿಸ್ಸಾರವೆಂದು ಅರಿತು ದ್ವೇಷರಹಿತನಾಗಿರುವನೋ ಆತನು ಸರ್ಪವು ಪೊರೆಯನ್ನು ತ್ಯಜಿಸುವಂತೆ ಇಹಪರಗಳನ್ನು ತ್ಯಜಿಸುತ್ತಾನೆ.
13. ಯಾವ ಭಿಕ್ಷುವು ಅತಿ ಶೀಘ್ರಗಾಮಿಯಲ್ಲವೋ ಅಥವಾ ಅತಿ ಮಂದಗಾಮಿಯಲ್ಲವೋ ಹಾಗು ಇದೆಲ್ಲವೂ ಸಂಪೂರ್ಣ ನಿಸ್ಸಾರವೆಂದು ಅರಿತು ಮೋಹರಹಿತನಾಗಿರುವನೋ ಆತನು ಸರ್ಪವು ಪೊರೆಯನ್ನು ತ್ಯಜಿಸುವಂತೆ ಇಹಪರಗಳನ್ನು ತ್ಯಜಿಸುತ್ತಾನೆ.
14. ಯಾವ ಭಿಕ್ಷುವಿನಲ್ಲಿ ಯಾವ ರೀತಿಯ ಆಸಕ್ತಿಯೂ ಇಲ್ಲವೋ ಹಾಗು ಅಕುಶಲದ (ಪಾಪ) ಮೂಲವು ನಷ್ಟವಾಗಿದೆಯೋ ಆತನು ಸರ್ಪವು ಪೊರೆಯನ್ನು ತ್ಯಜಿಸುವಂತೆ ಇಹಪರಗಳನ್ನು ತ್ಯಜಿಸುತ್ತಾನೆ.
15. ಯಾವ ಭಿಕ್ಷುವಿನಲ್ಲಿ ಪುನಃ ಸಂಸಾರದಲ್ಲಿ ಉತ್ಪನ್ನವಾಗುವ ಯಾವ ಕ್ಲೇಶವೂ ಇಲ್ಲವೋ ಆತನು ಸರ್ಪವು ಪೊರೆಯನ್ನು ತ್ಯಜಿಸುವಂತೆ ಇಹಪರಗಳನ್ನು ತ್ಯಜಿಸುತ್ತಾನೆ.
16. ಯಾವ ಭಿಕ್ಷುವಿನಲ್ಲಿ ಪುನಃ ಭವಬಂಧನದಲ್ಲಿ ಬೀಳುವ ಯಾವ ರೀತಿಯ ತೀವ್ರ ಬಯಕೆಯಿಲ್ಲವೊ ಆತನು ಸರ್ಪವು ಪೊರೆಯನ್ನು ತ್ಯಜಿಸುವಂತೆ ಇಹಪರಗಳನ್ನು ತ್ಯಜಿಸುತ್ತಾನೆ.
17. ಯಾವ ಭಿಕ್ಷುವು ಪಂಚನಿವರಣಗಳನ್ನು* (ತಡೆ) ತ್ಯಜಿಸಿರುವನೊ, ಯಾರು ಪಾಪರಹಿತನೊ, ಸಂದೇಹಮುಕ್ತನೋ, ಹಾಗು ಯಾರಲ್ಲಿ ಸಾಂಸಾರಿಕ ಆಸಕ್ತಿಗಳ ಮುಳ್ಳುಗಳು ಎಸೆಯಲ್ಪಟ್ಟಿರುವವೋ ಆತನು ಸರ್ಪವು ಪೊರೆಯನ್ನು ತ್ಯಜಿಸುವಂತೆ ಇಹಪರಗಳನ್ನು ತ್ಯಜಿಸುತ್ತಾನೆ.
ಇಲ್ಲಿಗೆ ಉರಗ ಸುತ್ತ ಮುಗಿಯಿತು.