Thursday 25 September 2014

brahmana dhammika sutta in kannada(the virtue of ancient brahmins)

7. ಬ್ರಾಹ್ಮಣ ಧಮ್ಮಿಕ ಸುತ್ತ
                (ಬ್ರಾಹ್ಮಣರ ಪುರಾತನ ಧರ್ಮ, ಬ್ರಾಹ್ಮಣರ ಲೋಭದಿಂದ ಯಜ್ಞದಲ್ಲಿ ಹಿಂಸೆ ಪ್ರಾರಂಭವಾಯಿತು. ಹಾಗು ಮಾತೃ ಸಮಾನವಾದ ಗೋವಿನ ಮೇಲೆ ಎಂದು ಶಸ್ತ್ರ ಎತ್ತಲಾರಂಭಿಸಿದರೊ, ಆಗ ನಾನಾ ಪ್ರಕಾರದ ರೋಗಗಳು ಉತ್ಪನ್ನವಾಯಿತು. ಮೊದಲಂತು ಇಚ್ಛೆ, ಹಸಿವು ಹಾಗು ವೃದ್ಧಾಪ್ಯ ಈ ಮೂರು ರೋಗಗಳು ಮಾತ್ರ ಇದ್ದವು).

                ಹೀಗೆ ನಾನು ಕೇಳಿದ್ದೇನೆ, ಒಮ್ಮೆ ಭಗವಾನರು ಶ್ರಾವಸ್ತಿಯಲ್ಲಿ ಅನಾಥಪಿಂಡಿಕನ ಚೇತವನ ಆರಾಮದಲ್ಲಿ ವಾಸಿಸುತ್ತಿದ್ದರು. ಆಗ ಕೋಸಲ ಜನಪದದ ನಿವಾಸಿಗಳಲ್ಲಿ ವೃದ್ಧರು, ಜೀರ್ಣರು, ಈ ಅವಸ್ಥೆಯುಳ್ಳ ಮಹಾಧನಿ ಬ್ರಾಹ್ಮಣರು ಎಲ್ಲಿ ಭಗವಾನರು ಇದ್ದರೋ ಅಲ್ಲಿಗೆ ಬಂದರು. ಅಲ್ಲಿ ಬಂದನಂತರ ಭಗವಾನರೊಂದಿಗೆ ಕುಶಲ- ಮಂಗಳ ವಿಚಾರಿಸಿದರು. ಕುಶಲ ವಿಚಾರಿಸಿದ ನಂತರ ಒಂದುಕಡೆ ಕುಳಿತರು. ಹಾಗೆ ಕುಳಿತ ಬ್ರಾಹ್ಮಣರು ಭಗವಾನರೊಂದಿಗೆ ಈಗಿನ ಬ್ರಾಹ್ಮಣರು ಪುರಾತನ ಬ್ರಾಹ್ಮಣರ ರೀತಿ ಬ್ರಾಹ್ಮಣ ಧರ್ಮ ಪಾಲಿಸುತ್ತಿರುವಂತೆ  ಕಾಣುತ್ತಿರುವರೇ? ಎಂದು ಕೇಳಿದರು.
                ಭಗವಾನರು - ಬ್ರಾಹ್ಮಣರೇ, ಈಗಿನ ಬ್ರಾಹ್ಮಣರು, ಪುರಾತನ ಬ್ರಾಹ್ಮಣರ ರೀತಿ ಬ್ರಾಹ್ಮಣ ಧರ್ಮ ಆಚರಿಸುತ್ತಿರುವಂತೆ ಕಾಣುತ್ತಿಲ್ಲ. ಗೋತಮರೇ, ತಾವು ನಮಗೆ ಪುರಾತನ ಬ್ರಾಹ್ಮಣರ ಧರ್ಮ ವಿವರಿಸಿದರೆ ಒಳ್ಳೆಯದು. ತಮಗೆ ಆಕ್ಷೇಪವಿಲ್ಲದಿದ್ದರೆ ಹೇಳಿ. ಹಾಗಾದರೆ ಬ್ರಾಹ್ಮಣರೇ ಕೇಳಿ, ಬಹು ಚೆನ್ನಾಗಿ ಮನದಟ್ಟು ಮಾಡಿಕೊಳ್ಳಿ, ಹೇಳುವೆನು. ಒಳ್ಳೆಯದು ಎಂದು ಹೇಳಿ ಆ ಧನಿಬ್ರಾಹ್ಮಣರು ಭಗವಾನರಿಗೆ ಉತ್ತರಿಸಿದರು. ಭಗವಾನವರು ಹೀಗೆ ಹೇಳಿದರು-
1.            ಮೊದಲಿನ ಋಷಿಗಳು ಸಂಯಮಿಗಳು ಹಾಗು ತಪಸ್ವಿಗಳಾಗಿದ್ದರು. ಅವರು ಐದು ಪ್ರಕಾರದ ಕಾಮ ಭೋಗಗಳನ್ನು ತ್ಯಾಗಮಾಡಿ ಸ್ವಹಿತದ ಕಾರ್ಯಗಳಲ್ಲಿ ತೊಡಗುತ್ತಿದ್ದರು.
2.            ಬ್ರಾಹ್ಮಣರ ಬಳಿ ಪಶುಗಳಾಗಲಿ, ಬಂಗಾರವಾಗಲಿ ಅಥವಾ ಧಾನ್ಯವಾಗಲಿ ಇರುತ್ತಿರಲಿಲ್ಲ. ಸ್ವ-ಅಧ್ಯಯನವನ್ನು  ಮಾಡುವುದೇ ಅವರ ಧನಧಾನ್ಯವಾಗಿತ್ತು. ಅವರು ಶ್ರೇಷ್ಠ ನಿಧಿಯಾದ ಬ್ರಹ್ಮವಿಹಾರದ ರಕ್ಷಣೆ ಮಾಡುತ್ತಿದ್ದರು.
3.            ಜನರು ಅವರಿಗಾಗಿ ಶ್ರದ್ಧೆಯಿಂದ ಭೋಜನವನ್ನು ಸಿದ್ಧಪಡಿಸಿ ದ್ವಾರದ ಬಳಿ ಇಡುತ್ತಿದ್ದರು. ಹುಡುಕಿ ಅವರಿಗೆ ಕೊಡಲು ಯೋಗ್ಯರೆಂದು ಭಾವಿಸುತ್ತಿದ್ದರು.
4.            ಸಮೃದ್ಧ ಜನಪದದ ಅಥವಾ ರಾಷ್ಟ್ರದ ಜನರು ನಾನಾ ಬಣ್ಣಗಳ ವಸ್ತ್ರಗಳು, ಶಯನಗಳು ಹಾಗು ನಿವಾಸ ಸ್ಥಾನಗಳನ್ನು ಅಪರ್ಿಸಿ ಅವರಿಗೆ ನಮಸ್ಕರಿಸುತ್ತಿದ್ದರು.
5.            ಬ್ರಾಹ್ಮಣರು ಅವದ್ಯ, ಅಜೇಯ ಹಾಗು ಧರ್ಮದಿಂದ ರಕ್ಷಿತರಾಗಿದ್ದರು. ಮನೆಗಳ ದ್ವಾರಗಳ ಬಳಿಗೆ ಹೋಗಲು ಅವರಿಗೆ ಯಾರೂ ಎಂದಿಗೂ ತಡೆಯುತ್ತಿರಲಿಲ್ಲ.
6.            ಮೊದಲಿನ ಬ್ರಾಹ್ಮಣರು ನಲವತ್ತೆಂಟು ವರ್ಷಗಳ ಕಾಲ ಬ್ರಹ್ಮಚರ್ಯವನ್ನು ಪಾಲಿಸುತ್ತಿದ್ದರು ಮತ್ತು ವಿದ್ಯೆ ಹಾಗು ಆಚರಣೆಯ ಅನ್ವೇಷಣೆಯಲ್ಲಿ ನಿರತರಾಗುತ್ತಿದ್ದರು.
7.            ಬ್ರಾಹ್ಮಣರು ಪರಸ್ತ್ರೀಯರ ಹತ್ತಿರ ಹೋಗುತ್ತಿರಲಿಲ್ಲ ಮತ್ತು ಅವರು ಪರಸ್ತ್ರೀಯರನ್ನು ಕೊಳ್ಳುತ್ತಲೂ ಇರಲಿಲ್ಲ. ಅವರು ಕೇವಲ ತನ್ನನ್ನು ಪ್ರೇಮಿಸುವ ಸ್ತ್ರೀಯೊಬ್ಬಳ ಮಿಲನ ಬಯಸುತ್ತಿದ್ದರು.
8.            ಬ್ರಾಹ್ಮಣರು ಋತು ಸಮಯವನ್ನು ಬಿಟ್ಟು ಮಧ್ಯದ ನಿಷಿದ್ಧ ಸಮಯದಲ್ಲಿ ಮೈಥುನ ಆಚರಿಸುತ್ತಿರಲಿಲ್ಲ.
9.            ಅವರು ಬ್ರಹ್ಮಚರ್ಯ, ಶೀಲ, ಋಜುತೆ, ಮೃದುತೆ, ತಪಸ್ಸು, ಸಜ್ಜನತೆ, ಅಹಿಂಸೆ ಹಾಗು ಕ್ಷೇಮದ ಪ್ರಶಂಸಕರಾಗಿದ್ದರು.
10.          ಅವರಲ್ಲಿ ಒಬ್ಬ ಶ್ರೇಷ್ಠ ಹಾಗು ದೃಢ ಪರಾಕ್ರಮಿ ಬ್ರಾಹ್ಮಣ ಇರುತ್ತಿದ್ದ. ಆತನು ಸ್ವಪ್ನದಲ್ಲಿಯೂ ಸಹಾ ಮೈಥುನದ ಬಗ್ಗೆ ಯೋಚಿಸುತ್ತಿರಲಿಲ್ಲ.
11.          ಆತನ ಆಚರಣೆಯನ್ನು ಅನುಸರಿಸಿ ಇಲ್ಲಿ ಕೆಲವು ಜ್ಞಾನಿಗಳು, ಬ್ರಹ್ಮಚರ್ಯ, ಶೀಲ ಹಾಗು ಕ್ಷಮೆಯ ಪ್ರಶಂಸೆ ಮಾಡಿದರು.
12.          ಆಗ ಅವರು ಧಾಮರ್ಿಕ ರೀತಿಯಿಂದ ಅಕ್ಕಿ, ಶಯನ, ವಸ್ತ್ರ, ತುಪ್ಪ ಹಾಗು ಎಣ್ಣೆಯನ್ನು ಯಾಚಿಸಿ ಅದನ್ನು ಏಕತ್ರಗೊಳಿಸಿ, ಯಜ್ಞದ ವಿನ್ಯಾಸ ಮಾಡಿದರು. ಅವರು ಆ ಯಜ್ಞದಲ್ಲಿ ಗೋವುಗಳ ಹತ್ಯೆ ಮಾಡಲಿಲ್ಲ.
13.          ಹೇಗೆ ಮಾತಾ-ಪಿತ, ಸೋದರ ಹಾಗು ಬಂಧುಗಳು ಇರುವರೋ, ಹಾಗೆಯೇ ಗೋವುಗಳು ನಮ್ಮ ಮಿತ್ರರಾಗಿವೆ. ಅದರಿಂದ ಅನೇಕ ಔಷಧಿಗಳು ಉತ್ಪತ್ತಿಯಾಗುತ್ತದೆ.
14.          ಈ ಗೋವುಗಳು, ಆಹಾರವನ್ನು, ಬಲವನ್ನು, ವರ್ಣವನ್ನು ಹಾಗು ಸುಖವನ್ನು ನೀಡುವಂತಹದ್ದಾಗಿದೆ. ಇದನ್ನು ಅರಿತು ಅವರು ಹತ್ಯೆಯನ್ನು ಮಾಡಲಿಲ್ಲ.
15.          ಕೋಮಲ, ವಿಶಾಲಕಾಯ, ಸುಂದರ ಹಾಗು ಯಶಸ್ವಿ ಬ್ರಾಹ್ಮಣರು ಈ ಧರ್ಮಗಳಿಂದ ಯುಕ್ತರಾಗಿ ತಮ್ಮ ಕಾರ್ಯಗಳಲ್ಲಿ ಮಗ್ನರಾಗುತ್ತಿದ್ದರೊ, ಅಲ್ಲಿಯವರೆಗೂ ಪ್ರಜೆಗಳು ಸಹಾ ಸುಖಿಯಾಗಿದ್ದರು.
16-17 ಕಾಲಕ್ರಮೇಣ ರಾಜನ ಸಂಪತ್ತು, ಅಲಂಕೃತ ಸ್ತ್ರೀಯರು, ಉತ್ಕೃಷ್ಟ ಕುದುರೆಗಳು, ಸುಂದರ ಎತ್ತಿನ ಬಂಡಿಗಳು, ರಥಗಳು, ನಿವಾಸ ಸ್ಥಾನಗಳು ಇತ್ಯಾದಿ ಭೋಗಗಳು ಕಂಡು ಅವರಲ್ಲಿ ಪರಿವರ್ತನೆಯಾಯಿತು.
18.          ಆ ಬ್ರಾಹ್ಮಣರು ನಗರ-ಮಂಡಲಿಯಿಂದ ಗೋವು, ನಾರಿಯರನ್ನು ಒಳಗೊಂಡು ವಿಪುಲವಾದ ಪ್ರಾಪಂಚಿಕ ಸಂಪತ್ತಿಗೆ ಲೋಭಪಟ್ಟರು.
19.          ಆಗ ಅವರು ಮಂತ್ರಗಳನ್ನು ರಚನೆಮಾಡಿ ಇಕ್ಷಾಕುವಿನ ಹತ್ತಿರ ಹೋದರು. ನಂತರ ಈ ರೀತಿ ಹೇಳಿದರು- ನೀವು ಬಹು ಸಂಪತ್ತುಳ್ಳವರಾಗಿದ್ದೀರಿ, ಈಗ ಯಜ್ಞ ಮಾಡಿ, ನಿಮ್ಮ ಬಳಿ ವಿಪುಲವಾದ ಸಂಪತ್ತಿದೆ ಯಜ್ಞಮಾಡಿ.
20.          ಆಗ ರಥಪತಿ ರಾಜನು ಬ್ರಾಹ್ಮಣರಿಂದ ವಿವರಿಸಲ್ಪಟ್ಟು, ಅವರ ಸಲಹೆಯಂತೆ ಅಶ್ವಮೇಧ, ಪುರುಷಮೇಧ, ಸಮ್ಮಪಾಸ (ಯಾತ ಯಜ್ಞ), ವಾಜಪೇಯ, ನಿರರ್ಗಲ (ಸರ್ವಮೇಧ) ಈ ಯಜ್ಞಗಳನ್ನು ಮಾಡಿದ ಬ್ರಾಹ್ಮಣರಿಗೆ ಧನವನ್ನು ನೀಡಲಾಯಿತು.
21-22. ಗೋವುಗಳು, ಶಯನಗಳು, ವಸ್ತ್ರ, ಅಲಂಕೃತ ಸ್ತ್ರೀಯರು, ಉತ್ತಮ ಅಶ್ವಗಳು, ಶ್ರೇಷ್ಠ ಎತ್ತುಗಳು, ಕಸೂತಿಯುಳ್ಳ ರಥಗಳು ಹಾಗು ಧನ-ಧಾನ್ಯಗಳನ್ನು ತುಂಬಿ, ಅನೇಕ ರೀತಿಯಿಂದ ಸರಿಯಾಗಿ ಸುಂದರ ಭವನಗಳನ್ನು ಧನದ ರೂಪವಾಗಿ ಪಾತ್ರೆಗಳಲ್ಲಿ ತುಂಬಿ ಬ್ರಾಹ್ಮಣರಿಗೆ ಕೊಟ್ಟರು.
23.          ಅವರು ಅಲ್ಲಿ ಧನವನ್ನು ಪಡೆದು ಸಂಗ್ರಹಿಸಲು ಇಷ್ಟಪಟ್ಟರು. ಈ ರೀತಿ ಇಚ್ಛೆಗೆ ವಶೀಭೂತರಾಗಿ ಆ ಬ್ರಾಹ್ಮಣರ ತೃಷ್ಣೆಯು ಬಹಳವಾಗಿ ಹೆಚ್ಚಿತು. ಅವರು ಮಂತ್ರಗಳನ್ನು ಪುನಃ ರಚಿಸಿ ಇಕ್ಷಾಕುವಿನ ಬಳಿ ಹೋದರು.
24.          ಹೀಗೆ ಹೇಳಿದರು - ಯಾವರೀತಿ ಜಲ, ಪೃಥ್ವಿ, ಅರಣ್ಯ ಹಾಗು ಧನಧಾನ್ಯವಿದೆಯೋ, ಅದೇರೀತಿಯಲ್ಲಿ ಮನುಷ್ಯರಿಗಾಗಿ ಗೋವುಗಳಿವೆ, ಆ ಪ್ರಾಣಿಗಳೆಲ್ಲವೂ ಉಪಭೋಗದ ವಸ್ತುಗಳಾಗಿವೆ. ನಿಮ್ಮ ಬಳಿಯಲ್ಲಿ ಅಪಾರ ಸಂಪತ್ತಿದೆ, ಯಜ್ಞ ಮಾಡಿ, ನಿಮ್ಮ ಬಳಿ ಬಹಳ ಧನವಿದೆ, ಯಜ್ಞ ಮಾಡಿ.
25.          ಈ ರೀತಿ ಬ್ರಾಹ್ಮಣರಿಂದ ಮಿಥ್ಯಾ ಅರಿವು ಮಾಡಿಕೊಂಡ ರಾಜನು ಯಜ್ಞದಲ್ಲಿ ಲಕ್ಷಾಂತರ ಗೋವುಗಳನ್ನು ವಧೆ ಮಾಡಿದನು.
26.          ಯಾವ ಗೋವುಗಳು ಕಾಲಿನಿಂದಾಗಲಿ, ಕೊಂಬಿನಿಂದಾಗಲಿ ಅಥವಾ ಯಾವುದೇ ಅಂಗದಿಂದಾಗಲಿ, ಹಿಂಸಿಸುತ್ತಿರಲಿಲ್ಲವೋ, ಕುರಿಗಳ ಸಮಾನವಾಗಿ ಸಾಧುವಾಗಿತ್ತೋ ಹಾಗು ಕೊಡದ ತುಂಬಾ ಹಾಲು ನೀಡುತ್ತಿತ್ತೋ, ಆ ಮುಗ್ಧ ಹಸುಗಳ ಕೊಂಬುಗಳನ್ನು ಹಿಡಿದು ರಾಜನು ಶಸ್ತ್ರದಿಂದ ಕೊಂದನು.
27.          ಈ ರೀತಿ ಗೋವುಗಳ ಮೇಲೆ ಆಗುತ್ತಿದ್ದ ಶಸ್ತ್ರಪಾತವನ್ನು ಕಂಡು ದೇವತೆಗಳು, ಪ್ರಜೆಗಳು, ಇಂದ್ರ, ಅಸುರ, ರಾಕ್ಷಸರು ಮುಂತಾದವರು ಇದು ಅಧರ್ಮ ವೆಂದು ಕೂಗಿಕೊಂಡರು.
28.          ಮೊದಲು ಕೇವಲ ಮೂರು ರೋಗಗಳಿದ್ದವು - ಇಚ್ಛೆ, ಹಸಿವು ಹಾಗು ವೃದ್ಧಾಪ್ಯ. ಆದರೆ ಪಶುಗಳ ಹತ್ಯೆಯಿಂದ ತೊಂಬತ್ತೆಂಟು ರೋಗಗಳಾದವು.
29.          ಈ ಹಿಂಸಾರೂಪಿ ಅಧರ್ಮವು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಪುರೋಹಿತರು ನಿದರ್ೊಷಿ ಗೋವುಗಳನ್ನು ಹತ್ಯೆ ಮಾಡುತ್ತಿದ್ದಾರೆ ಹಾಗು ಧರ್ಮವನ್ನು ಭ್ರಷ್ಟಗೊಳಿಸುತ್ತಿದ್ದಾರೆ.
30.          ಈ ಪ್ರಕಾರದ ನೀಚಕರ್ಮ ಹಳೆಯದಾಗಿದೆ ಮತ್ತು ಜ್ಞಾನಿಗಳಿಂದ ನಿಂದಿಸಲ್ಪಡುತ್ತದೆ. ಜನರು ಈ ಪ್ರಕಾರದ ಪುರೋಹಿತರನ್ನು ಕಂಡಾಗ ನಿಂದಿಸುತ್ತಾರೆ.
31.          ಈ ಪ್ರಕಾರದ ಧರ್ಮ ಚ್ಯುತರಾದ ಮೇಲೆ ಶೂದ್ರರಲ್ಲಿ ಹಾಗು ವೈಶ್ಯರಲ್ಲಿ ಒಡಕುಂಟಾಯಿತು. ಕ್ಷತ್ರಿಯರು ಸಹಾ ವಿಭಿನ್ನ ಭಾಗಗಳಾಗಿ ಹಂಚಿಹೋದರು. ಸ್ತ್ರೀಯು ಸಹಾ ಪತಿಯನ್ನು ಅನಾದರ ಮಾಡತೊಡಗಿದಳು.
32.          ಕ್ಷತ್ರಿಯ, ಬ್ರಾಹ್ಮಣ ಹಾಗು ಬೇರೆ ಗೋತ್ರದಿಂದ ರಕ್ಷಿತರಾದವರು ಮನುಷ್ಯ ಹುಟ್ಟಿನ ಉದ್ದೇಶ ಮುರಿದು ಕಾಮಾಸಕ್ತರಾದರು.
                ಹೀಗೆ ಭಗವಾನರು ನುಡಿದ ನಂತರ ಮಹಾಧನಿ ಬ್ರಾಹ್ಮಣರು ಭಗವಾನರಿಗೆ ಹೀಗೆ ನುಡಿದರು- ಆಶ್ಚರ್ಯವಾಗಿದೆ ಗೋತಮರೇ, ಆಶ್ಚರ್ಯವಾಗಿದೆ. ಹೇಗೆಂದರೆ ಗೋತಮರೇ, ತಲೆಕೆಳಕಾಗಿದ್ದನ್ನು ಸರಿಯಾಗಿ ನಿಲ್ಲಿಸುವಂತೆ, ಅಡಗಿರುವುದನ್ನು ಅಗೆದು ತೋರಿಸುವಂತೆ, ದಾರಿತಪ್ಪಿದವರಿಗೆ ಮಾರ್ಗದಶರ್ಿಯಾಗಿ, ಅಂಧಕಾರದಲ್ಲಿದ್ದವರಿಗೆ ಬೆಳಕು ತೋರಿಸಿದಂತೆ, ಚಕ್ಷುವುಳ್ಳವರು ವಸ್ತುಗಳನ್ನು ಕಾಣುವ ಹಾಗೆ ಗೌತಮರಿಂದ ಅನೇಕ ರೀತಿಯಿಂದ ಧರ್ಮವು ಪ್ರಕಾಶಿಸಿತು. ನಾವೆಲ್ಲಾ ಗೋತಮ ಬುದ್ಧರಿಗೆ ಶರಣು ಹೋಗುತ್ತೇವೆ. ಹಾಗೆಯೇ ಧಮ್ಮ ಹಾಗು ಸಂಘಕ್ಕೂ ಸಹಾ ಶರಣು ಹೋಗುತ್ತೇವೆ. ನಮ್ಮನ್ನು ಜೀವನಪರ್ಯಂತ ಉಪಾಸಕರೆಂದು ಅನುಗ್ರಹಿಸಿ.

ಇಲ್ಲಿಗೆ ಬ್ರಾಹ್ಮಣ ಧಮ್ಮಿಕ ಸುತ್ತ ಮುಗಿಯಿತು.

No comments:

Post a Comment